Saturday, 2 June 2018

ನಾವು ಎಳೆಯರು ನಾವು ಗೆಳೆಯರು

ನಾವು ಎಳೆಯರು ನಾವು ಗೆಳೆಯರು
ಹೃದಯ ಹೂವಿನ ಹಂದರ
ನಾಳೆ ನಾವೇ ನಾಡ ಹಿರಿಯರು
ನಮ್ಮ ಕನಸದೊ ಸುಂದರ ।। ಪಲ್ಲವಿ ।।
ಹಿಂದು ಮುಸ್ಲಿಂ ಕ್ರೈಸ್ತರೆಲ್ಲರಿ-
ಗೊಂದೆ ಭಾರತ ಮಂದಿರ
ಶಾಂತಿ ದಾತನು ಗಾಂಧಿ ತಾತನು
ಎದೆಯ ಬಾನಿನ ಚಂದಿರ ।। ೧ ।।
ಜಾತಿ ರೋಗದ ಭೀತಿ ಕಳೆಯುತ
ನೀತಿ ಮಾರ್ಗದಿ ನಡೆವೆವು
ಒಂದೆ ಮಾನವ ಕುಲವು ಎನ್ನುತ
ವಿಶ್ವ ಧರ್ಮವ ಪಡೆವೆವು ।। ೨ ।।
ವೈರ ಮತ್ಸರ ಸ್ವಾರ್ಥ ವಂಚನೆ
ಕ್ರಿಮಿಗಳೆಲ್ಲವ ತೊಡೆವೆವು
ದೇಶ ಸೇವೆಗೆ ದೇಹ ಸವೆಸುವ
ದೀಕ್ಷೆ ಇಂದೇ ತೊಡೆವೆವು ।। ೩ ।।
ನಮ್ಮ ಸುತ್ತಲು ಹೆಣೆದು ಕೊಳ್ಳಲಿ
ಸ್ನೇಹ ಪಾಶದ ಬಂಧನ
ಬೆಳಕು ಬೀರಲಿ ಗಂಧ ಹರಡಲಿ
ಉರಿದು ಪ್ರೇಮದ ಚಂದನ ।। ೪ ।।
ನಮ್ಮ ಶಕ್ತಿಗೆ ದಿವ್ಯ ಭಕ್ತಿಗೆ
ದೇಶವಾಗಲಿ ನಂದನ
ಅಂದು ಪ್ರೇಮದಿ ಎತ್ತಿ ಕೊಳ್ಳಲಿ
ಭೂಮಿ ತನ್ನಯ ಕಂದನ ।। ೫ ।।
ಸಾಹಿತ್ಯ: ಶಂ.ಗು. ಬಿರಾದಾರ⁠⁠