Friday, 1 June 2018

ಧವಳ ಹಿಮದ ಗಿರಿಯ ಮೇಲೆ ಅರುಣ ಧ್ವಜವ ಹಾರಿಸಿ

ಧವಳ ಹಿಮದ ಗಿರಿಯ ಮೇಲೆ ಅರುಣ ಧ್ವಜವ ಹಾರಿಸಿ
ಮುಗಿಲ ಏಣಿ ಏರಿ ನಿಂದು ವಿಜಯಭೇರಿ ಬಾರಿಸಿ ||||

ಸಿಂಧು ಕಣಿವೆಯೊಡಲಿನಿಂದ ವೀರಗಾನ ಮೊಳಗಲಿ
ಧ್ಯೇಯರವಿಯ ಕಿರಣ ತರುಣರೆದೆಯ ಗುಡಿಯ ಬೆಳಗಲಿ
ಎದ್ದು ನಿಲ್ಲು ಭಾರತ... ದಿವ್ಯಪ್ರಭೆಯ ಬೀರುತ ||||

ಮನವ ಹಸಿರುಗೊಳಿಸುತಿಹಳು ಭಾವಗಂಗೆ ಅನುದಿನ
ಇಳೆಯ ಕೊಳೆಯ ತೊಳೆಯುತಿಹಳು ತಾಯಿ ತುಂಗೆ ಕ್ಷಣಕ್ಷಣ
ನೆಲವಿದೆಮ್ಮ ಪಾವನ... ಎನಿತು ಧನ್ಯ ಜೀವನ ||||

ನಾಡಗುಡಿಯ ಮೂರು ಕಡೆಯು ಪೊರೆವ ಶಾಂತ ಸಾಗರ
ಹಿಂದು ಜನರ ಹೃದಯವಿಂದು ಕ್ಷಾತ್ರತೇಜದಾಗರ
ಸ್ಫೂರ್ತಿ ಗೌರಿಶಂಕರ... ಕಾಲಯಮನು ಕಿಂಕರ ||||

ಅಸುರತನದ ಉಸಿರ ನೀಗಿ ಭೇದಭಾವ ನೀಗುತ
ಸಾಗು ಮುಂದೆ ಮುಂದೆ ಸಾಗು ಮಾತೆಯನ್ನು ಸ್ಮರಿಸುತ
ನಿನಗೆ ಜಯದ ಆರತಿ... ಹರಸು ತಾಯೆ ಭಾರತಿ ||||