Monday, 22 May 2017

ಕರ್ನಾಟಕ

ಕರ್ನಾಟಕ

ಕರ್ನಾಟಕ ಭಾರತದ ನಾಲ್ಕು ಪ್ರಮುಖ ದಾಕ್ಷಿಣಾತ್ಯ ರಾಜ್ಯಗಳಲ್ಲಿ ಒಂದು. ೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು "ಮೈಸೂರು ರಾಜ್ಯ" ಎಂದಿದ್ದಿತು. ಇದಕ್ಕೆ ಕಾರಣ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು.
"ಕರ್ನಾಟಕ" ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು "ಕರು+ನಾಡು" ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರು ನಾಡು ಎಂದರೆ "ಎತ್ತರದ ಪ್ರದೇಶ" ಎಂದು ಅರ್ಥ. ಕರ್ನಾಟಕ ರಾಜ್ಯದ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು.
ಕರ್ನಾಟಕವು ಪಶ್ಚಿಮದಲ್ಲಿ ಅರಬೀ ಸಮುದ್ರದಿಂದ, ವಾಯವ್ಯದಲ್ಲಿ ಗೋವದಿಂದ, ಉತ್ತರದಲ್ಲಿ ಮಹಾರಾಷ್ಟ್ರದಿಂದ, ಪೂರ್ವದಲ್ಲಿ ಆಂಧ್ರ ಪ್ರದೇಶದಿಂದ, ಆಗ್ನೇಯದಲ್ಲಿ ತಮಿಳನಾಡುವಿನಿಂದ, ನೈಋತ್ಯದಲ್ಲಿ ಕೇರಳದಿಂದ ಸುತ್ತುವರಿಯಲ್ಪಟ್ಟಿದೆ.
ಪೂರ್ವ ಶಿಲಾಯುಗದಷ್ಟು ಪ್ರಾಚೀನತೆಯಿರುವ ಕರ್ನಾಟಕವು ಭಾರತದ ಅನೇಕ ಪ್ರಬಲ ಸಾಮ್ರಾಜ್ಯಗಳಿಗೆ ನೆಲೆಬೀಡಾಗಿದೆ. ಈ ಸಾಮ್ರಾಜ್ಯಗಳಿಂದ ಆಶ್ರಯ ಪಡೆದಿರುವ ಅನೇಕ ತತ್ವಜ್ಞಾನಿಗಳು ಮತ್ತು ಕವಿಗಳಿಂದ ಆರಂಭಿಸಲ್ಪಟ್ಟಿರುವ ಸಾಮಾಜಿಕ, ಧಾರ್ಮಿಕ ಹಾಗು ಸಾಹಿತ್ಯಕ ಚಳವಳಿಗಳು ಇಂದಿನವರೆಗೂ ನಡೆದುಕೊಂಡು ಬಂದಿವೆ. ಕನ್ನಡ ಭಾಷೆಯ ಸಾಹಿತಿಗಳು ಭಾರತದಲ್ಲಿ ಅತಿ ಹೆಚ್ಚು ಜ್ಞಾನಪಪೀಠ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕವು ಭಾರತದ ಶಾಸ್ತ್ರೀಯ ಸಂಗೀತ ಪರಂಪರೆಗಳಾದ ಕರ್ನಾಟಕ ಸಂಗೀತ ಶೈಲಿಗೆ ಹಾಗು ಹಿಂದೂಸ್ಥಾನಿ ಸಂಗೀತ ಶೈಲಿಗೆ ಮಹತ್ತರವಾದ ಕೊಡುಗೆ ನೀಡಿದೆ.
ಪೂರ್ವ ಶಿಲಾಯುಗದಷ್ಟು ಪ್ರಾಚೀನತೆಯಿರುವ ಕರ್ನಾಟಕವು ಭಾರತದ ಅನೇಕ ಪ್ರಬಲ ಸಾಮ್ರಾಜ್ಯಗಳಿಗೆ ನೆಲೆಬೀಡಾಗಿದೆ. ಈ ಸಾಮ್ರಾಜ್ಯಗಳಿಂದ ಆಶ್ರಯ ಪಡೆದಿರುವ ಅನೇಕ ತತ್ವಜ್ಞಾನಿಗಳು ಮತ್ತು ಕವಿಗಳಿಂದ ಆರಂಭಿಸಲ್ಪಟ್ಟಿರುವ ಸಾಮಾಜಿಕ, ಧಾರ್ಮಿಕ ಹಾಗು ಸಾಹಿತ್ಯಕ ಚಳವಳಿಗಳು ಇಂದಿನವರೆಗೂ ನಡೆದುಕೊಂಡು ಬಂದಿವೆ. ಕನ್ನಡ ಭಾಷೆಯ ಸಾಹಿತಿಗಳು ಭಾರತದಲ್ಲಿ ಅತಿ ಹೆಚ್ಚು ಜ್ಞಾನಪಪೀಠ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕವು ಭಾರತದ ಶಾಸ್ತ್ರೀಯ ಸಂಗೀತ ಪರಂಪರೆಗಳಾದ ಕರ್ನಾಟಕ ಸಂಗೀತ ಶೈಲಿಗೆ ಹಾಗು ಹಿಂದೂಸ್ಥಾನಿ ಸಂಗೀತ ಶೈಲಿಗೆ ಮಹತ್ತರವಾದ ಕೊಡುಗೆ ನೀಡಿದೆ.

ಚರಿತ್ರೆ

ಕರ್ನಾಟಕದ ಚರಿತ್ರೆಯ ಕೆಲ ಅಂಶಗಳು ಕರ್ನಾಟಕದ ಚರಿತ್ರೆಯು ಪೂರ್ವ ಶಿಲಾಯುಗದಷ್ಟು ಹಳೆಯದಾಗಿದೆ. ಕರ್ನಾಟಕದಲ್ಲಿ ಭೂಶೋಧನೆಯಿಂದ ದೊರೆತಿರುವ ಕೈ-ಕೊಡಲಿಗಳು ಮತ್ತು ಕಡುಗತ್ತಿಗಳು (ಶಿಲೆಯಿಂದ ಮಾಡಲ್ಪಟ್ಟಿರುವ) ಪೂರ್ವ ಶಿಲಾಯುಗದ ಕೈ-ಕೊಡಲಿ ಸಂಸ್ಕ್ರತಿಯ ಇರುವಿಕೆಗೆ ಸಾಕ್ಷಿಯಾಗಿವೆ. ನೂತನ ಶಿಲಾಯುಗ ಹಾಗು ಬೃಹತ್ ಶಿಲಾಯುಗ ಸಂಸ್ಕ್ರತಿಯ ಕುರುಹುಗಳು ಕೂಡ ಕರ್ನಾಟಕದಲ್ಲಿ ದೊರೆತಿವೆ. ಹರಪ್ಪದಲ್ಲಿ ಭೂಶೋಧನೆಯಿಂದ ದೊರೆತಿರುವ ಚಿನ್ನವು ಕರ್ನಾಟಕದ ಗಣಿಗಳಿಂದ ಆಮದು ಮಾಡಲ್ಪಟ್ಟಿರುವ ವಿಚಾರದಿಂದ ವಿದ್ವಾಂಸರು ಕ್ರಿ.ಪೂ.೩೦೦೦ದಲ್ಲೆ ಕರ್ನಾಟಕ ಮತ್ತು ಸಿಂಧು ಕಣಿವೆ ನಾಗರಿಕತೆ ನಡುವೆ ಸಂಬಂಧಗಳಿದ್ದವೆಂದು ಪ್ರತಿಪಾದಿಸಿದ್ದಾರೆ.
ಕ್ರಿ.ಪೂ.೩೦೦ಕ್ಕಿಂತ ಮೊದಲು, ಕರ್ನಾಟಕದ ಬಹುಪಾಲು ಭಾಗ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ಆಳ್ವಿಕೆಗೆ ಒಳಪಡುವ ಮೊದಲು ನಂದ ಸಾಮ್ರಾಜ್ಯದ ಭಾಗವಾಗಿದ್ದಿತ್ತು. ತದನಂತರ ನಾಲ್ಕು ಶತಮಾನಗಳ ಕಾಲ ಶಾತವಾಹನರು ಕರ್ನಾಟಕದ ಬಹುಪಾಲು ಭಾಗವನ್ನಾಳಿದರು.

ವೆರ್ವ್ರೆ

ಶಾತವಾಹನರ ಅವನತಿಯು ಪ್ರಪ್ರಥಮ ಪ್ರಾದೇಶಿಕ (ಕನ್ನಡ) ಸಾಮ್ರಾಜ್ಯಗಳಾದ ಕದಂಬ ಸಾಮ್ರಾಜ್ಯ ಮತ್ತು ಪಶ್ಚಿಮ ಗಂಗ ಸಾಮ್ರಾಜ್ಯಗಳ ಉಗಮಕ್ಕೆ ನಾಂದಿಯಾಯಿತು. ಈ ಸಾಮ್ರಾಜ್ಯಗಳ ಸ್ಥಾಪನೆಯು ಪ್ರದೇಶದ ಸ್ವತಂತ್ರ ರಾಜಕೀಯ ಅಸ್ತಿತ್ವದ ಪ್ರಾದುರ್ಭಾವಕ್ಕೆ ಕಾರಣವಾಯಿತು. ಕದಂಬ ಸಾಮ್ರಾಜ್ಯವು ಮಯೂರಶರ್ಮನಿಂದ ಸ್ಥಾಪಿಸಲ್ಪಟ್ಟಿತು ಹಾಗು ಅದರ ರಾಜಧಾನಿ ಬನವಾಸಿಯಾಗಿತ್ತು. ತಲಕಾಡು ಪಶ್ಚಿಮ ಗಂಗ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಈ ಸಾಮ್ರಾಜ್ಯಗಳು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಉಪಯೋಗಿಸಿದ ಸಾಮ್ರಾಜ್ಯಗಳಲ್ಲಿ ಮೊದಲನೆಯವು. ಹಲ್ಮಿಡಿ ಶಾಸನವು ಮತ್ತು ಬನವಾಸಿಯಲ್ಲಿ ದೊರೆತ ಐದನೆಯ ಶತಮಾನದ ತಾಮ್ರದ ನಾಣ್ಯವು ಇದಕ್ಕೆ ಸಾಕ್ಷಿಯಾಗಿವೆ.
ಈ ಸಾಮ್ರಾಜ್ಯಗಳ ನಂತರ ದಖನ್ ಅನ್ನು ಬಹುಪಾಲು ಆಳುತ್ತಿರುವ ಬಾದಾಮಿ ಚಾಲುಕ್ಯರು, ಮಾನ್ಯಖೇಟದ ರಾಷ್ಠ್ರಕೂಟರು, ಪಶ್ಚಿಮ ಚಾಲುಕ್ಯರು ತಮ್ಮ ರಾಜಧಾನಿಗಳನ್ನು ಕರ್ನಾಟಕದಲ್ಲಿ ಸ್ಥಾಪಿಸಿದರು. ಪಶ್ಚಿಮ ಚಾಲುಕ್ಯರು ವಿಶಿಷ್ಟ ಶೈಲಿಯ ವಾಸ್ತುಶಿಲ್ಪ ಮತ್ತು ಕನ್ನಡ ಸಾಹಿತ್ಯಕ್ಕೆ ಆಶ್ರಯದಾತರಾಗಿದ್ದರು. ಇದು ೧೨ನೆಯ ಶತಮಾನದ ಹೊಯ್ಸಳ ಕಲೆಗೆ ಪೂರ್ವಗಾಮಿಯಾಗಿದ್ದಿತು. ಕ್ರಿ.ಶ.೯೯೦-೧೨೧೦ವರೆಗೆ ಕರ್ನಾಟಕದ ಕೆಲವು ಪ್ರದೇಶಗಳು ಚೋಳ ಸಾಮ್ರಾಜ್ಯದ ಆಧೀನವಾಗಿತ್ತು.ಈ ಕಾಲದಲ್ಲಿ ಪಶ್ಚಿಮ ಚಾಲುಕ್ಯರು, ಚೋಳ ಹಾಗು ಪೂರ್ವ ಚಾಲುಕ್ಯರ ವಿರುದ್ದ ನಿರಂತರ ಕಾಳಗದಲ್ಲಿರುತ್ತಿದ್ದರು
ಮೊದಲನೆಯ ಸಹಸ್ರಮಾನದ ಆದಿಯಲ್ಲಿ ಹೊಯ್ಸಳರು ಕರ್ನಾಟಕದಲ್ಲಿ ಪ್ರಬಲರಾದರು. ಹೊಯ್ಸಳರ ಕಾಲದಲ್ಲಿ ಸಾಹಿತ್ಯ ಮತ್ತು ವಾಸ್ತುಶಿಲ್ಪ ಉಚ್ಛ್ರಾಯಸ್ಥಿತಿಯನ್ನು ತಲುಪಿದವು. ಇದು ವಿಶಿಷ್ಟ ಕನ್ನಡ ಕಾವ್ಯ ಶೈಲಿಗಳ ಉದಯಕ್ಕೆ ಕಾರಣವಾಯಿತು. ಹೊಯ್ಸಳರ ಕಾಲದಲ್ಲಿ ದೇಗುಲಗಳು ಮತ್ತು ಶಿಲ್ಪಗಳು ವೇಸರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗುತ್ತಿತ್ತು. ಹೊಯ್ಸಳ ಸಾಮ್ರಾಜ್ಯವು ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲವು ಪ್ರದೇಶಗಳನ್ನು ತನ್ನ ಆಳ್ವಿಕೆಗೆ ಒಳಪಡಿಸಿತ್ತು. ೧೪ನೆಯ ಶತಮಾನದ ಆದಿಯಲ್ಲಿ ಹರಿಹರ ಮತ್ತು ಬುಕ್ಕರಾಯ ವಿಜಯನಗರ ಸಾಮ್ರಾಜ್ಯವನ್ನು ತುಂಗಾ ನದಿ ತೀರದಲ್ಲಿ (ಈಗಿನ ಬಳ್ಳಾರಿ ಜಿಲ್ಲೆಯಲ್ಲಿ) ಸ್ಥಾಪಿಸಿದರು. ಹೊಸಪಟ್ಟಣ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವಿಜಯನಗರ ಸಾಮ್ರಾಜ್ಯವು ಎರಡು ಶತಮಾನಗಳ ಕಾಲ ದಕ್ಷಿಣ ಭಾರತದಲ್ಲಿ ಮುಸ್ಲಿಂ ಸಾಮ್ರಾಜ್ಯಗಳ ಮುನ್ನಡೆಗೆ ತಡೆಗೋಡೆಯಾಯಿತು.
೧೫೬೫ರಲ್ಲಿ,ತಾಳಿಕೋಟೆಯ ಯುದ್ಧದಲ್ಲಿ ದಖನ್ ಸುಲ್ತಾನರಿಂದ ವಿಜಯನಗರ ಸಾಮ್ರಾಜ್ಯದ ಪತನ ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಭಾರಿ ಬದಲಾವಣೆ ತಂದಿತು. ಬಹಮನಿ ಸುಲ್ತಾನರ ಪತನಾನಂತರ ಬಿಜಾಪುರದ ಸುಲ್ತಾನರು ಪ್ರಾಬಲ್ಯಕ್ಕೆ ಬಂದು,ದಖನ್ ಪ್ರದೇಶವನ್ನು ಆಳುತ್ತಿದ್ದರು. ೧೭ನೆಯ ಶತಮಾನದ ಕೊನೆಯಲ್ಲಿ ಬಿಜಾಪುರದ ಸುಲ್ತಾನರು ಮೊಘಲ್ ರಿಂದ ಪರಾಭವ ಹೊಂದಿದರು. ಬಹಮನಿ ಮತ್ತು ಬಿಜಾಪುರದ ಸುಲ್ತಾನರು ಉರ್ದು ಹಾಗು ಪರ್ಷಿಯನ್ ಸಾಹಿತ್ಯ ಮತ್ತು ಇಂಡೋ-ಸಾರಾಸೆನಿಕ್ ವಾಸ್ತುಶಿಲ್ಪವನ್ನು ಪ್ರೋತ್ಸಾಹಿಸುತ್ತಿದ್ದರು.
ತದನಂತರದ ಅವಧಿಯಲ್ಲಿ, ಉತ್ತರ ಕರ್ನಾಟಕದ ಕೆಲವು ಪ್ರದೇಶಗಳನ್ನು ಹೈದರಾಬಾದಿನ ನಿಜಾಮರು, ಬ್ರಿಟೀಷರು ಹಾಗು ಅನ್ಯ ರಾಜರು ಆಳುತ್ತಿದ್ದರು. ದಕ್ಷಿಣದಲ್ಲಿ ಮೈಸೂರು ರಾಜಮನೆತನದವರು (ವಿಜಯನಗರ ಸಾಮ್ರಾಜ್ಯದ ಸಾಮಂತರಸರು) ಕೆಲಕಾಲ ಸ್ವತಂತ್ರವಾಗಿ ಆಳ್ವಿಕೆ ನಡೆಸುತ್ತಿದ್ದರು. ಎರಡನೆಯ ಕೃಷ್ಣರಾಜ ಒಡೆಯರ್ ಅವರ ಮರಣಾನಂತರ ಮೈಸೂರಿನ ಸೇನಾಧಿಪತಿಯಾಗಿದ್ದ ಹೈದರ್ ಅಲಿಯು ಪ್ರದೇಶದ ಆಡಳಿತವನ್ನು ಕೈಗೆ ತೆಗೆದುಕೊಂಡನು. ಹೈದರ್ ಅಲಿಯ ನಿಧನಾನಂತರ, ಅವನ ಪುತ್ರನಾದ ಟಿಪ್ಪು ಸುಲ್ತಾನನು ಮೈಸೂರಿನ ಅರಸನಾದನು. ಐರೋಪ್ಯರ ವಿಸ್ತರಣೆಯನ್ನು ತಡೆಯಲು ಹೈದರ್ ಅಲಿ ಹಾಗು ಟಿಪ್ಪು ಸುಲ್ತಾನನು ನಾಲ್ಕು ಆಂಗ್ಲೋ-ಮೈಸೂರು ಯುದ್ಧಗಳಲ್ಲಿ ತೊಡಗಿದರು. ನಾಲ್ಕನೆಯ ಹಾಗು ಕೊನೆಯ ಆಂಗ್ಲೋ-ಮೈಸೂರು ಯುದ್ಧವು ಟಿಪ್ಪು ಸುಲ್ತಾನನ ಮರಣಕ್ಕೆ ಮತ್ತು ಬ್ರಿಟೀಷ ಸಾಮ್ರಾಜ್ಯದಲ್ಲಿ ಮೈಸೂರು ರಾಜ್ಯದ ಸೇರ್ಪಡೆಗೆ ಕಾರಣವಾಯಿತು. ಬ್ರಿಟೀಷರು ಮೈಸೂರು ರಾಜ್ಯವನ್ನು ಒಡೆಯರ್ ಮನೆತನದವರಿಗೆ ಹಿಂದಿರುಗಿಸಿದರು ಹಾಗು ಬ್ರಿಟೀಷ ಸಾಮ್ರಾಜ್ಯದಲ್ಲಿ ರಾಜಪ್ರಭುತ್ವ ಪ್ರದೇಶದ ಸ್ಥಾನಮಾನ ನೀಡಿತು.
ಭಾರತಾದ್ಯಂತ ಬ್ರಿಟೀಷರ "ಡಾಕ್ಟ್ರೈನ್ ಆಫ್ ಲ್ಯಾಪ್ಸ್ " ರಾಜನೀತಿಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದ ಕಾಲದಲ್ಲಿ, ಕರ್ನಾಟಕದಲ್ಲಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದವರು ೧೮೩೦ರಲ್ಲಿ ಅಂದರೆ ೧೮೫೭ರ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸುಮಾರು ೩ ದಶಕಗಳ ಹಿಂದೆ ಬ್ರಿಟೀಷರ ವಿರುದ್ಧ ದಂಗೆಯೆದ್ದರು. ತದನಂತರ ಸೂಪ, ಬಾಗಲಕೋಟೆ, ಶೋರಾಪುರ, ನರಗುಂದ ಹಾಗು ದಾಂಡೇಲಿ ಹೀಗೆ ಹಲವೆಡೆಗಳಲ್ಲಿ ದಂಗೆಗಳು ನಡೆಯಿತು. ೧೮೫೭ರ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ನಡೆದ ದಂಗೆಗಳನ್ನು ಮುಂಡರಗಿ ಭೀಮರಾವ್, ಭಾಸ್ಕರ ರಾವ್ ಭಾವೆ, ಹಳಗಳಿ ಬೇಡರು, ವೆಂಕಟಪ್ಪ ನಾಯಕ ಮುಂತಾದವರು ಮುನ್ನಡೆಸಿದರು. ೧೯ನೆಯ ಶತಮಾನದ ಅಂತ್ಯದಲ್ಲಿ ಸ್ವಾತಂತ್ರ್ಯ ಚಳವಳಿಯು ತೀವ್ರವಾಯಿತು. ಕಾರ್ನಾಡ ಸದಾಶಿವ ರಾವ್, ಆಲೂರು ವೆಂಕಟರಾಯರು, ಎಸ್. ನಿಜಲಿಂಗಪ್ಪ, ಕೆಂಗಲ್ ಹನುಮಂತಯ್ಯ, ನಿಟ್ಟೂರು ಶ್ರೀನಿವಾಸ ರಾವ್ ಮುಂತಾದವರು ೨೦ನೆಯ ಶತಮಾನದ ಪೂರ್ವಾರ್ಧದವರೆಗೂ ಸ್ವಾತಂತ್ರ್ಯ ಹೋರಾಟವನ್ನು ಮುಂದುವರೆಸಿಕೊಂಡು ಬಂದರು.
ಭಾರತದ ಸ್ವಾತಂತ್ರ್ಯದ ನಂತರ ಮೈಸೂರು ಸಂಸ್ಥಾನ ಭಾರತದ ಒಕ್ಕೂಟವನ್ನು ಸೇರಿತು. ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ "ರಾಜಪ್ರಮುಖ"ರಾದರು. ಒಡೆಯರ ಮನೆತನಕ್ಕೆ ಭಾರತ ಸರ್ಕಾರದಿಂದ ಗೌರವಧನ ೧೯೭೫ರ ವರೆಗೆ ಸಂದಾಯವಾಗುತ್ತಿತ್ತು. ಈ ಮನೆತನದ ಸದಸ್ಯರು ಈಗಲೂ ಮೈಸೂರು ಅರಮನೆಯ ಒಂದು ಭಾಗದಲ್ಲಿ ಇದ್ದಾರೆ.
ಏಕೀಕರಣ ಚಳವಳಿಯ ಬಹುಕಾಲದ ಬೇಡಿಕೆಯ ಮೇರೆಗೆ ನವೆಂಬರ್ ೧, ೧೯೫೬ ರಂದು ರಾಜ್ಯ ಪುನಸ್ಸಂಘಟನಾ ಕಾಯಿದೆಗೆ ಅನುಸಾರವಾಗಿ ಮೈಸೂರು ರಾಜ್ಯಕ್ಕೆ ಕೊಡಗು ರಾಜ್ಯ ಹಾಗೂ ಸುತ್ತಲ ಮದರಾಸು, ಹೈದರಾಬಾದ್, ಮತ್ತು ಮುಂಬೈ ರಾಜ್ಯಗಳ ಕನ್ನಡ-ಪ್ರಧಾನ ಪ್ರದೇಶಗಳು ಸೇರಿ ಏಕೀಕೃತ "ವಿಶಾಲ ಮೈಸೂರು" ಅಸ್ತಿತ್ವಕ್ಕೆ ಬಂದಿತು (ಬಳ್ಳಾರಿ ಜಿಲ್ಲೆ ೧೯೫೩ರಲ್ಲಾಗಲೆ ರಾಜ್ಯಕ್ಕೆ ಸೇರಿತ್ತು). ನವೆಂಬರ್ ೧, ೧೯೭೩ ರಲ್ಲಿ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲಾಯಿತು.

ಯಲ್ಲಪ್ಪ ನಂದಿ.


ಕಿತ್ತೂರು ಚೆನ್ನಮ್ಮ

ಕಿತ್ತೂರು ಚೆನ್ನಮ್ಮ

ಕನ್ನಡನಾಡಿನ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವವಳು, ಸ್ವಾತಂತ್ರ್ಯ ಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ್ಯ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ಅಲ್ಲಿ ತೋರಿಸಿದ ಧೈರ್ಯ, ಸಾಹಸ, ಕೆಚ್ಚುಗಳು ಚೆನ್ನಮ್ಮನನ್ನು ಅಜರಾಮರವಾದ ಕೀರ್ತಿಶಿಖಿರಕ್ಕೇರಿಸಿವೆ. ಚೆನ್ನಮ್ಮನಿಂದ ಕಿತ್ತೂರು ಪ್ರಸಿದ್ಧವಾಗಿದೆ.
ಕಿತ್ತೂರಿನ ಇತಿಹಾಸವು ಕ್ರಿ.ಶ. ೧೫೮೬ರಿಂದಲೇ ಆರಂಭವಾಗುತ್ತದೆ. ಮೂಲತಃ ಮಲೆನಾಡಿನ ಗೌಡ ಮನೆತನದಿಂದ ಬಂದ ಮಲ್ಲ ಹೆಸರಿನ ಸೋದರರಿಬ್ಬರು ವಿಜಾಪುರದ ಆದಿಲಶಾಹಿ ಸೈನ್ಯದಲ್ಲಿ ಸೇರಿಕೊಂಡಿದ್ದರು. ಈ ಸೋದರರಲ್ಲಿ ಹಿರಿಯ ಮಲ್ಲನಿಗೆ “ ಶಮಶೇರ ಜಂಗಬಹಾದ್ದೂರ ” ಎನ್ನುವ ಬಿರುದನ್ನು ಹಾಗೂ ಹುಬ್ಬಳ್ಳಿ ವಿಭಾಗದ ಸರದೇಶಮುಖಿಯನ್ನು ನೀಡಲಾಗಿತ್ತು.
ವಿಜಾಪುರದ ಪತನದ ನಂತರ ಕಿತ್ತೂರು ದೇಸಾಯಿಗಳು ತಮ್ಮ ರಕ್ಷಣೆಗಾಗಿ ಅನೇಕ ಕಾಳಗಗಳನ್ನು ಎದುರಿಸಬೇಕಾಯಿತು. ಬ್ರಿಟಿಷರು ಭಾರತದಲ್ಲಿ ಕಾಲೂರುವ ಸಮಯದಲ್ಲಿ ಇಲ್ಲಿಯ ರಾಜಕೀಯ ಪರಿಸ್ಥಿತಿ ಬಹಳ ವಿಲಕ್ಷಣವಾಗಿತ್ತು. ಉತ್ತರ ಹಿಂದುಸ್ತಾನದಲ್ಲಿ ಮೊಘಲ್ ಬಾದಶಾಹಿ ನಿರ್ಬಲವಾಗಿತ್ತು.ದಕ್ಷಿಣದಲ್ಲಿ ಸ್ವರಾಜದ ವಿಸ್ತರಣೆಗಾಗಿ ಹೋರಾಡುತ್ತಿದ್ದ ಪೇಶವಾಯಿ, ಆಕ್ರಮಣಕಾರಿ ಧೋರಣೆಯ ಹೈದರಾಬಾದಿನ ನಿಜಾಮಶಾಹಿ ಹಾಗು ಮೈಸೂರಿನ ಹೈದರ್ ಅಲಿ ಇವರೆಲ್ಲರ ನಡುವೆ ತಮ್ಮ ಉಳಿವಿಗಾಗಿ ಹೋರಾಡುತ್ತಿದ್ದ ಚಿಕ್ಕ ಪುಟ್ಟ ಪಾಳೆಯಗಾರರು. ಇಂತಹ ರಾಜಕೀಯ ಪರಿಸ್ಥಿತಿ ಧೂರ್ತ, ಕ್ರೂರ, ಹಾಗು adventurist ಧೋರಣೆಯ ಬ್ರಿಟಿಷ ಈಸ್ಟ ಇಂಡಿಯಾ ಕಂಪನಿಗೆ ಸುವರ್ಣಾವಕಾಶವನ್ನು ಒದಗಿಸಿತ್ತು. ಇಂತಹ ಸಮಯದಲ್ಲಿ ಮಲ್ಲಸರ್ಜನ ದೊರೆಯನ್ನು ಟಿಪ್ಪು ಸುಲ್ತಾನನು ಸೆರೆ ಹಿಡಿದು ಕಪಾಲದುರ್ಗದಲ್ಲಿ ಸೆರೆಯಿಟ್ಟಿದ್ದನು. ಉಪಾಯದಿಂದ ತಪ್ಪಿಸಿಕೊಂಡ ದೊರೆ ೧೮೦೩ರಲ್ಲಿ ವೆಲ್ಲೆಸ್ಲಿಗೆ ನೆರವು ನೀಡಿ ಕಿತ್ತೂರನ್ನು ಭದ್ರಗೊಳಿಸಿದ್ದನು. ೧೮೦೯ರಲ್ಲಿ ಪೇಶವೆಯವರಿಗೆ ರೂ.೧,೭೫,೦೦೦ ಕೊಟ್ಟು, ಅವರ ಸ್ಥಾನಿಕ ಕಾವಲು ಸೈನ್ಯದ ಖರ್ಚನ್ನು ನೀಡಿ ಅವರಿಂದ ಸನದು ಪಡೆದಿದ್ದನು. ಆದರೆ ಪೇಶ್ವೆಯವರು ವಿಶ್ವಾಸಘಾತ ಮಾಡಿ ಮಲ್ಲಸರ್ಜನನ್ನು ಸೆರೆ ಹಿಡಿದು ೩ ವರ್ಷ ಕಾಲ ಪುಣೆಯಲ್ಲಿಟ್ಟರು. ೧೮೧೬ರಲ್ಲಿ ಬಿಡುಗಡೆ ಹೊಂದಿ ಮರಳುವಾಗ ದಾರಿಯಲ್ಲಿಯೆ ಮಲ್ಲಸರ್ಜನು ಕೊನೆಯುಸಿರನ್ನೆಳೆದ. ಅವನ ಮಗ ಶಿವಲಿಂಗ ರುದ್ರಸರ್ಜನು ಮರಾಠಾ ಹಾಗು ಟೀಪು ಸುಲ್ತಾನ ಇವರ ಕಿರಿಕಿರಿ ತಪ್ಪಿಸಲು ಬ್ರಿಟಿಶರ ಜೊತೆಗೆ ಸ್ನೇಹದಿಂದಿದ್ದ. ಆದರೆ ಅದೆಂತಹ ಸ್ನೇಹ! ಪ್ರತಿ ವರ್ಷ ರೂ. ೧,೭೦,೦೦೦ ಕಾಣಿಕೆ ಕೊಡುವ ಕರಾರಿನ ಮೇಲೆ ಬ್ರಿಟಿಷರು ಈ ದೊರೆಗೆ ಸನ್ನದು ನೀಡಿದರು. ಶಿವಲಿಂಗರುದ್ರಸರ್ಜನು ೧೧ ಸಪ್ಟಂಬರ ೧೮೨೪ರಂದು ವಾರಸದಾರರಿಲ್ಲದೆ ತೀರಿಕೊಂಡನು. ಈ ಎಳೆವಯಸ್ಸಿನ ದೊರೆಯ ಹೆಂಡತಿ ವೀರಮ್ಮನಿಗೆ ಆಗ ೧೧ ವರ್ಷ ವಯಸ್ಸು! ಮರಣದ ಪೂರ್ವದಲ್ಲಿ ಶಿವಲಿಂಗರುದ್ರಸರ್ಜ ಮಾಸ್ತಮರಡಿ ಗೌಡರ ಪುತ್ರ ಶಿವಲಿಂಗಪ್ಪನನ್ನು ದತ್ತಕ ತೆಗೆದುಕೊಂಡ. ಈ ದತ್ತಕವನ್ನು ಧಾರವಾಡದ ಕಲೆಕ್ಟರ ಥ್ಯಾಕರೆ ತಿರಸ್ಕರಿಸುತ್ತಾನೆ! ೧೩ ಸಪ್ಟಂಬರ ೧೮೨೪ ರಂದು ಥ್ಯಾಕರೆ ಸ್ವತಃ ಕಿತ್ತೂರಿಗೆ ಬಂದು ಕಂಪನಿ ಸರ್ಕಾರದಿಂದ ಮುಂದಿನ ಆದೇಶ ಬರುವವರೆಗೂ ತಾತ್ಕಾಲಿಕವಾಗಿ ಮಲ್ಲಪ್ಪಶೆಟ್ಟಿ ಹಾಗು ಹಾವೇರಿ ವೆಂಕಟರಾವ ಇವರನ್ನು ಸಂಸ್ಥಾನದ ವ್ಯವಹಾರ ನಿರ್ವಹಿಸಲು ನೇಮಕ ಮಾಡುತ್ತಾನೆ ಹಾಗು ಕಿತ್ತೂರಿನ ಭಂಡಾರಕ್ಕೆ ಬೀಗಮುದ್ರೆ ಹಾಕುತ್ತಾನೆ.
ಆದರೆ ಇದನ್ನು ಕೆಚ್ಚೆದೆಯಿಂದ ಎದುರಿಸಿದವಳು ಮೃತ ಶಿವಲಿಂಗರುದ್ರಸರ್ಜನ ಮಲತಾಯಿ ಚೆನ್ನಮ್ಮ!
ಚೆನ್ನಮ್ಮ ಹುಟ್ಟಿದ್ದು ೧೭೭೮ರಲ್ಲಿ. ಬೆಳಗಾವಿಯಿಂದ ಉತ್ತರಕ್ಕೆ ಸುಮಾರು ೬ ಕಿ.ಮಿ. ದೂರದಲ್ಲಿರುವ ಕಾಕತಿ ಅವಳ ಹುಟ್ಟೂರು. ತಂದೆ ಕಾಕತಿಯ ದೇಸಾಯಿ ಧೂಳಪ್ಪಗೌಡರು. ಚನ್ನಮ್ಮ ಎಳೆ ವಯಸ್ಸಿನಲ್ಲಿಯೆ ಕುದುರೆ ಸವಾರಿ ಹಾಗು ಬಿಲ್ಲುವಿದ್ಯೆಗಳನ್ನು ಕರಗತ ಮಾಡಿಕೊಂಡಿದ್ದಳು. ಈ ಕಠಿಣ ಪರಿಸ್ಥಿತಿಯಲ್ಲಿ ಎದೆಗುಂದದೆ ಅವಳು ರಾಜನಿಷ್ಠರಾದ ಗುರುಸಿದ್ದಪ್ಪ, ಹಿಮ್ಮತಸಿಂಗ, ನರಸಿಂಗರಾವ , ಗುರುಪುತ್ರ ಮತ್ತು ಇತರ ಬೆಂಬಲಿಗರ ನೆರವಿನಿಂದ ತನ್ನ ದತ್ತಕ ಮೊಮ್ಮಗನಿಗೆ ಪಟ್ಟಗಟ್ಟಿದಳು. ಇದನ್ನು ಜಾನಪದ ಗೀತೆಯೊಂದು ಈ ರೀತಿ ವರ್ಣಿಸುತ್ತದೆ:
ಹಿಮ್ಮತ್ತು ಬಾಳ ಹಿಡಿದಳು ಚನ್ನವ್ವ
ಮೊಮ್ಮಗ್ಗ ಪಟ್ಟಗಟ್ಟಿ
ಕಿತ್ತೂರಿನ ಮೇಲೆ ಬ್ರಿಟಿಷರು ಮಾಡಬಹುದಾದ ಆಕ್ರಮಣವನ್ನು ತಪ್ಪಿಸಲು ಚೆನ್ನಮ್ಮ ಥ್ಯಾಕರೆಗೆ, ಮನ್ರೋನಿಗೆ ಹಾಗು ಚಾಪ್ಲಿನ್ನನಿಗೂ ಸಹ ಸಂಧಾನಕ್ಕಾಗಿ ಪತ್ರ ಬರೆದಿದ್ದಾಳೆ. ಅದರೆ ಬ್ರಿಟಿಷರು ಕಿತ್ತೂರಿನ ಒಡೆತನವನ್ನೆ ಅಪೇಕ್ಷಿಸಿದಾಗ, ಚೆನ್ನಮ್ಮ ಮುಂದಾಲೋಚನೆಯಿಂದ ಕೊಲ್ಲಾಪುರ ಮೊದಲಾದ ನೆರೆಯ ಸಂಸ್ಥಾನಗಳ ಸಹಾಯ ಕೋರಿ ಪತ್ರವ್ಯವಹಾರ ಸಹ ಮಾಡಿದ್ದಾಳೆ. ೨೧ ಅಕ್ಟೋಬರ ೧೮೨೪ರಂದು ಥ್ಯಾಕರೆ ಕಿತ್ತೂರಿಗೆ ಬಂದನು. ಮೂರನೆಯ ದಿನ ಅಂದರೆ ಅಕ್ಟೋಬರ ೨೩ರಂದು ಕೋಟೆಯ ಮೇಲೆ ತೋಪು ಹಾರಿಸಲು ತನ್ನ ಸೈನ್ಯಕ್ಕೆ ಅಪ್ಪಣೆ ಕೊಟ್ಟ. ಥಟ್ಟನೆ ತೆಗೆದ ಕೋಟೆಯ ಬಾಗಿಲಿನಿಂದ ಸಾವಿರಾರು ಜನ ಕಿತ್ತೂರು ವೀರರು ಸರದಾರ ಗುರುಸಿದ್ದಪ್ಪನವರ ಮುಂದಾಳ್ತನದಲ್ಲಿ ಥ್ಯಾಕರೆಯ ಸೈನ್ಯದ ಮೆಲೆ ಮುಗಿಬಿದ್ದರು. ಚೆನ್ನಮ್ಮ ರಾಣಿಯ ಅಂಗರಕ್ಷಕ ಅಮಟೂರು ಬಾಳಪ್ಪನ ಗುಂಡಿಗೆ ಥ್ಯಾಕರೆ ಬಲಿಯಾದ. ಸ್ಟೀವನ್ಸನ್ ಹಾಗು ಈಲಿಯಟ್ ಸೆರೆಯಾಳಾದರು. ದೇಶದ್ರೋಹಿಗಳಾದ ಕನ್ನೂರು ವೀರಪ್ಪ, ಸರದಾರ ಮಲ್ಲಪ್ಪ ಅವರೂ ಬಲಿಯಾದರು.
ಚೆನ್ನಮ್ಮನಿಗೆ ಹಾಗು ಬ್ರಿಟಿಷರಿಗೆ ಮತ್ತೆ ಪತ್ರವ್ಯವಹಾರ ನಡೆಯುತ್ತದೆ. ೧೮೨೪ ಡಿಶಂಬರ ೨ ರಂದು ಸ್ಟೀವನ್ಸನ್ ಹಾಗು ಈಲಿಯಟ್ ಇವರ ಬಿಡುಗಡೆಯಾಗುತ್ತದೆ. ಆದರೆ ಮಾತಿಗೆ ತಪ್ಪಿದ ಬ್ರಿಟಿಷರು ದಿಶಂಬರ ೩ ರಂದು ಅಪಾರ ಸೈನ್ಯದೊಂದಿಗೆ ಮುತ್ತಿಗೆ ಹಾಕಿ ಕೋಟೆಯನ್ನು ಒಡೆಯಲು ಪ್ರಾರಂಭಿಸುತ್ತಾರೆ. ಡಿಶಂಬರ ೪ ರಂದು ಸರದಾರ ಗುರುಸಿದ್ದಪ್ಪ ಸೆರೆಯಾಳುಗುತ್ತಾರೆ. ಡಿಶಂಬರ ೫ರಂದು ಚೆನ್ನಮ್ಮ ತನ್ನ ಸೊಸೆಯರಾದ ವೀರಮ್ಮ ಮತ್ತು ಜಾನಕಿಬಾಯಿಯರ ಜೊತೆಗೆ ಕೈದಿಯಾಗುತ್ತಾಳೆ. ಡಿಶಂಬರ ೧೨ ರಂದು ಚೆನ್ನಮ್ಮ ಹಾಗು ವೀರಮ್ಮರನ್ನು ಬೈಲಹೊಂಗಲಕ್ಕೆ ಒಯ್ಯಲಾಗುತ್ತದೆ. ಅಲ್ಲಿ ೪ ವರ್ಷಗಳವರೆಗೆ ಸೆರೆಯಾಳಾಗಿ ಉಳಿದ ಚೆನ್ನಮ್ಮ ೧೮೨೫ ಫೆಬ್ರುವರಿ ೨ ರಂದು ನಿಧನಹೊಂದುತ್ತಾಳೆ. ಮುಂದೆ ಮೇ ೨೦ರಂದು ಜಾನಕಿಬಾಯಿ ನಿಧನಳಾಗುತ್ತಾಳೆ.
ಆದರೆ ದೇಶನಿಷ್ಠರ ಹೋರಾಟ ನಿಂತಿರುವದಿಲ್ಲ. ಕಾಳಗದಲ್ಲಿ ಸೆರೆ ಸಿಕ್ಕು ಆ ಮೇಲೆ ಬಿಡುಗಡೆಯಾದ ಸಂಗೊಳ್ಳಿ ರಾಯಣ್ಣ ೧೮೨೯ರಲ್ಲಿ ಹೋರಾಟ ಮುಂದುವರೆಸುತ್ತಾನೆ. ಇವನ ಹೋರಾಟಕ್ಕೆ ನೆರವು ನೀಡುತ್ತಿರುವ ಸಂಶಯದ ಮೇಲೆ ವೀರಮ್ಮನನ್ನು ಬ್ರಿಟಿಷರು ಮೊದಲು ಕುಸುಗಲ್ಲಿಗೆ, ಆ ಬಳಿಕ ಬೇರೊಂದು ಸ್ಥಳಕ್ಕೆ ಒಯ್ಯುತ್ತಾರೆ.
ಇತ್ತ ರಾಯಣ್ಣನ ಹೋರಾಟ ಮುಂದುವರೆದಿರುತ್ತದೆ. ವಿಶ್ವಾಸದ್ರೋಹಿಗಳು ಇವನ ಸಂಗಡಿಗರಂತೆ ನಟಿಸುತ್ತ ೧೮೩೦ ಫೆಬ್ರುವರಿಯಲ್ಲಿ ಇವನನ್ನು ಬ್ರಿಟಿಷರಿಗೆ ಹಿಡಿದುಕೊಡುತ್ತಾರೆ. ಕಂಪನಿ ಸರಕಾರ ಈ ಕಾರ್ಯಕ್ಕಾಗಿ ಲಿಂಗನಗೌಡ ಮತ್ತು ವೆಂಕನಗೌಡರಿಗೆ ೩೦೦ ರೂಪಾಯಿ ಬಹುಮಾನ ಕೊಡುತ್ತದೆ.
ಮೇ ೧೮೩೦ರಲ್ಲಿ ದತ್ತುಪುತ್ರ ಶಿವಲಿಂಗಪ್ಪ ಹಾಗು ಇತರ ೪೦೦ ಜನರು ಬ್ರಿಟಿಷರಿಗೆ ಸ್ವಯಂ ಸೆರೆಯಾಗುತ್ತಾರೆ. ಜುಲೈ ೧೮೩೦ರಂದು ವೀರಮ್ಮ ಸೆರೆಮನೆಯಲ್ಲಿ ಮರಣಹೊಂದುತ್ತಾಳೆ. ವಿಷ ತೆಗೆದುಕೊಂಡು ಮರಣ ಹೊಂದಿದಳೆಂದೂ, ಇಂಗ್ಲಿಶರೆ ವಿಷ ಹಾಕಿ ಕೊಂದರೆಂದೂ ಪ್ರತೀತಿಯಿದೆ.
ಕಿತ್ತೂರು ಇತಿಹಾಸದ ಚರಮಗೀತೆಯನ್ನಾಗಿ ಈ ಲಾವಣಿಯನ್ನು ಉದಾಹರಿಸಬಹುದು :
“ನಂದಗsಡ ಊರಾಗ ಮಂದ್ಯಾಗ ರಾಯಣ್ಣ|
ತಂದು ಶೂಲಕ್ಕ ಹಾಕ್ಯಾರೋ|
ತಂದು ಶೂಲಕ್ಕ ಹಾಕ್ಯಾರೊ – ಕಿತ್ತೂರ|
ಗೊಂದsಲ ಶೂರಗ ದುರ್ಮರಣೋ|
ಹೊಂಗಲದ ಮಠದಾಗ ಲಿಂಗಪೂಜಿಯ ಮಾಡಿ|
ಭಂಗಾಗುದೆಂದು ಎದಿಗುಂದಿ|
ಭಂಗಾಗುದೆಂದು ಎದಿಗುಂದಿ – ಚನ್ನವ್ವ|
ಉಂಗುರದ ವಜ್ರವ ನುಂಗ್ಯಾಳೋ|

ಯಲ್ಲಪ್ಪ ನಂದಿ.

Tuesday, 31 January 2017

ಕಂಕಣ ಬಲ

ಕೋಗಿಲೆಯ ಹಾಡು ಕೇಳಲು
ಬರಬೇಕಂತೆ ವಸಂತ ಕಾಲ
ಹೆಣ್ಣಿನ ಕೊರಳಿಗೆ ತಾಳಿ ಕಟ್ಟಲು
ಕೂಡಿ ಬರಬೇಕಂತೆ ಕಂಕಣ ಬಲ.

ಬರುವ ಗಂಡಿಗೇನೂ ಬರವಿಲ್ಲ
ಆದರೆ ಅದೇಕೊ ಮನಸು ಒಪ್ಪುತ್ತಿಲ್ಲ
ಜಾತಕದ ಹೊಂದಾಣಿಕೆ ಆಗುತ್ತಿಲ್ಲ
ಮೆಟ್ಟಿದ ಚಪ್ಪಲಿ ಸವೆಯುವುದು ತಪ್ಪಲಿಲ್ಲ.

ಪೂಜೆ, ಪುನಸ್ಕಾರ, ಜಪ, ತಪ,ಹೋಮ-ಹವನ
ಅದೆಷ್ಟು ಜ್ಯೋತಿಷಿಗಳಿಂದೆ ಪರದಾಟ
ತಿಕಲು ಮೈಂಡಿಗೆ ಮಂಕುಭೂದಿ ಎರಚಿ
ಗೂಟ ನೆಟ್ಟು ಆಡಿಸುವರೆಷ್ಟು ಆಟ.

ಹರಕೆ ಹೊತ್ತು ನಡೆದ ಮಂದಿ
ತುಂಬುತಿದೆ ದೇವಸ್ಥಾನದ ಹುಂಡಿ
ಭವಿಷ್ಯ ಹೇಳುವವರ ಕೈ ಜಣ ಜಣ
ನಿರಾಸೆಯಲಿ ಮನಸು ಬಣ ಬಣ.

ಕಾಕ ತಾಳೀಯವೊ ಹಣೆ ಬರಹವೊ
ಇಲ್ಲಾ ಜಾತಕದ ಮಹಿಮೆಯೊ
ಒಟ್ಟಿನಲ್ಲಿ ಎಲ್ಲೆಂದರಲಿ ಕಾಣುವುದು
ವಧು ವರರ ಒಂಟಿ ದುಡಿತದ ಸಂತೆ.

ಮನೆ ಮನೆಯಲ್ಲೂ ನೀಗದ ಹತಾಷೆ
ಕೈ ಕಟ್ಟಿ ಕುಳಿತಿಹರು ನಂಬಿ ಭಗವಂತನಿಶ್ಚೆ
ಅತೀ ನಿರೀಕ್ಷೆ ಸರಿಯಲ್ಲ, ತಿಳುವಳಿಕೆ ಬೇಕಲ್ಲ
ನಂಬಿ ಕೂತರೆ ಗಣಕೂಟ ಹಾಕುವುದಿಲ್ಲ ಊಟ.

ಮನಸು ಮನಸುಗಳ ಹೊಂದಾಣಿಕೆ ಆದರಿಲ್ಲಿ
ನಡೆಸೇ ನಡೆಸುವರು ಮುತ್ತಿನಂತ ಸಂಸಾರ
ಹಿರಿಯರರಿತು ಮಾತು ಕಥೆಗೆ ಮುಂದಾದಲ್ಲಿ
ಆಗುವರು ಹೆಣ್ಣು ಗಂಡು ಜನುಮದ ಜೋಡಿ.

ಮದುಮಗಳು

ಅಂಗಳದ ತುಂಬೆಲ್ಲ
ರಂಗು ರಂಗಿನ ರಂಗೋಲಿ
ಅಲ್ಲಿ ಬಣ್ಣಗಳದೆ ಹಾವಳಿ.
ಕಲ್ಪನೆಯ ನಾಡಲ್ಲಿ
ತಳಿರು ತೋರಣಗಳ ಶೃಂಗಾರ
ಜಗಮಗಿಸುವ ಬೆಳಕು.
ಅಲ್ಲಲ್ಲಿ ನಿನ್ನ ಹೆಜ್ಜೆಗಳ ಗುರುತು
ಮೌನ ಮಾತುಗಳ ಮೆರವಣಿಗೆ
ಭರವಸೆಯ ಚಿತ್ತಾರ.
ಬದುಕ ಬಂಧಿಸುವ
ಉತ್ತುಂಗದ ಕಾಳಜಿ
ಭಾಷೆ, ನಿರೀಕ್ಷೆ.
ಸಾಕು ಬಿಡು
ಊಟ ಉಪಚಾರ
ಜಾಗವೇ ಇಲ್ಲ ಬಿಡು.
ಹಣೆಯ ಕುಂಕುಮ,ಅರಿಶಿನ
ತಲೆ ತುಂಬಾ ಹೂ ದಿಂಡಿನೊಂದಿಗೆ
ನೋಡು ಹೊಸ ಮದುಮಗಳ!
ಹೂ ನಗು ನಾಚಿಕೆ
ಅವಳಾಗುವಳು
ಮುತ್ತೈದೆ.




Monday, 30 January 2017

ಕೆಲವು ಹನಿಗಳು

ಬಿಸಿಲು
ಸೂರ್ಯ ಕಿಚಾಯಿಸಿ
ನಕ್ಕಿದ್ದ
ಭೂಮಿ ಬೆದರಿ
ಬೆವರುತ್ತಿತ್ತು !!!!


ಗಡಿಯಾರ
ನೀನು ತಿರುಗಿದ್ದಕ್ಕೆ
ನನ್ನ
ಸಮಯವೆಲ್ಲ
ಖಾಲಿಯಾಗಿದೆ.


ಹಣೆಬರಹ
ಯಾರೋ
ಹಾಗೇ, ಹೀಗೆ
ಎಂದೋ ಬರೆದಿಟ್ಟ
ಶೀರ್ಷಿಕೆ .


ಪಾಲಿಸಿ
ದಿನಾ, ನಾ ಆಫೀಸ್ ಗೆ ಹೊರಟಾಗ
ನನ್ನವಳು ಅನ್ನುತ್ತಿದ್ದಳು,
"ರೀ ರಸ್ತೆ ನಿಯಮ ಪಾಲಿಸಿ"
ಈಗ ಹೇಳುದೇ ಇಲ್ಲ
ಕಾರಣ ನಾ ಮಾಡಿದ್ದೇನೆ
"ವಿಮಾ ಪಾಲಿಸಿ"!!.


ಪರವಾನಿಗೆ
ಯಾರು ಕೊಟ್ಟರು ನಿನಗೆ
ನನ್ನ ಮನದೊಳಗೆ
ನೂರಾರು ಕನಸ ತುಂಬಿಸಲು
ವಿಶೇಷ ಪರವಾನಿಗೆ??.


ಯಲ್ಲಪ್ಪ ನಂದಿ.

ಜಾತಿ


ನಾ ಹುಟ್ಟುವಾಗಲೇ
ಹುಟ್ಟಿಕೊಂಡಿತು,
ನನ್ನ ಸುತ್ತಲೇ
ಸುತ್ತಿಕೊಂಡಿತು.
ಪರದೆ ಮೇಲೆ ಯಾರೋ
ಸಣ್ಣಗೆ ಎಳೆದ ಗೆರೆ
ಅಳಿಸದೆ ಪರಿಧಿಯಾಯಿತು .

ಸುತ್ತಣ ಗೋಡೆ,
ಕೆಡವಿದಷ್ಟು ಕಟ್ಟೋ ಮಂದಿ,
ಹಾರೆ ಗುದ್ದಲಿಗಳ ಮೇಲೆ
ಹಾರೋ  ವಿಭಜನೆಯ ಪತಾಕೆ.
ಹಾಹಕಾರಗಳ ನಡುವೆ,
ಆಹಾರ ಬೇಯಿಸಿಕೊಂಡದ್ದು
ಅವರವರು, ಅವರವರ ಮತಕ್ಕೆ .

ಕಾಣದ ದೇವರುಗಳಿಗೆ
ಕೈ, ಕಾಲು, ಕಣ್ಣು ಕೊಟ್ಟು
ಅಲ್ಲಲ್ಲಿ ನಿಲ್ಲಿಸಿ ಆಯಿತು.
ಅವ ಏನು ಮಾಡಿಯಾನು
ಪೂಜಿಸಲೊಂದು ಜಾತಿ,
ಬೇಡಲೊಂದು .
ಎಂದೂ ಮುಗಿಯದ ಇಷ್ಟಾರ್ಥ!!.

ಅಂದು ಗುರು ಹೇಳಿದ್ದ
ಒಂದೇ ಜಾತಿ,ಮತ,ಕುಲ.
ನಾವು ಕೇಳಲಿಲ್ಲವಲ್ಲ,
ಗುರುವಿನ
ಗುಲಾಮನಾಗಲಿಲ್ಲ.
ಒಬ್ಬೊಬ್ಬರಿಗೆ ಒಂದೊಂದು
ಮೀಸಲಾತಿ,
ಹೀಗೇ ಆದರೆ ಮುಂದೊಂದು ದಿನ
ಪೂರ್ತಿ ಅವನತಿ.!!!



Tuesday, 24 January 2017

ಸಂಗೊಳ್ಳಿ ರಾಯಣ್ಣ ಜೀವನ ಚರಿತ್ರೆ


ಜನನ ಆಗಸ್ಟ್ ೧೫, ೧೭೯೮ ಜನ್ಮ ಸ್ಥಳ ಸಂಗೊಳ್ಳಿ, ಕಿತ್ತೂರು ಸಾಮ್ರಾಜ್ಯ (ಇಂದಿನ ಬೆಳಗಾವಿ, ಕರ್ನಾಟಕ, ಭಾರತ) ಮರಣ ಜನವರಿ ೨೬, ೧೮೩೧ ಮರಣ ಸ್ಥಳ ನಂದಗಡ (ಇಂದಿನ ಕರ್ನಾಟಕ, ಭಾರತ) ಪರಿಚಯ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿರುವ ನೇಗಿನಹಾಳ ಗ್ರಾಮವು ಕೆಂಚವ್ವನ ತವರು ಮನೆಯಾಗಿದ್ದರು ಸಂಗೊಳ್ಳಿಯು ರಾಯಣ್ಣನ ಜನ್ಮಸ್ಥಳ ಹಾಗೂ ಹೋರಾಟದ ಭೂಮಿಯಾಗಿದೆ. ಚೆನಮ್ಮಳ ಆಸ್ತಾನದಲ್ಲಿ ವಾಲಿಕರ್ ವೃತ್ತಿ ಮಾಡುವ ಕುರುಬ ಮನೆತನದವನಾಗಿದ್ದ ರಾಯಣ್ಣನನ್ನು ಜನ, ರಾಯಾ ಎಂದು ಕರೆಯುತ್ತಿದರು. ಅಷ್ಠೆ ಅಲ್ಲದೆ ಈತನು ಗೇರಿಲ್ಲಾ ತಂತ್ರದ ರೂವಾರಿಯಾಗಿದ್ದನು. ಬ್ರಿಟಿಷರ ವಿರುದ್ಧದ ಯುದ್ಧದಲ್ಲಿ ಚನ್ನಮ್ಮ ಹಾಗು ರಾಯಣ್ಣ ಇಬ್ಬರೂ ಸೆರೆಯಾಳಾದರು. ಬ್ರಿಟಿಷರು ಚನ್ನಮ್ಮನನ್ನು ಬೈಲಹೊಂಗಲದಲ್ಲಿ ಸೆರೆಯಲ್ಲಿಟ್ಟರು. ಸಂಗೊಳ್ಳಿ ರಾಯಣ್ಣನನ್ನು ಬ೦ಧಿಸಿ ನ೦ದಗಡ ದಲ್ಲಿ ಗಲ್ಲಿಗೆರಿಸಿದರು. ಜನವರಿ ೨೬ ೧೮೩೧ರಂದು ಗಲ್ಲಿ ಗೇರಿಸಿದರು. ಸಂಗೊಳ್ಳಿ ರಾಯಣ್ಣ ಜನಿಸಿದ ದಿನಾಂಕವಾದ ಆಗಸ್ಟ್ ೧೫ ೧೭೯೮ , ಭಾರತಕ್ಕೆ ಸ್ವಾತಂತ್ರ್ಯ ದೊರೆತ ದಿನಾಂಕವಾದರೆ, ಆತ ಗಲ್ಲಿಗೇರಿದ ದಿನಾಂಕ ಜನವರಿ ೨೬, ಭಾರತವು ಗಣರಾಜ್ಯವೆಂದು ಘೋಷಿಸಿದ ದಿನಾಂಕವಾಗಿದೆ. ರಾಯಣ್ಣನ ಉಕ್ತಿ, "ನನ್ನ ಕೊನೆ ಆಸೆ ಏನೆಂದರೆ, ಮತ್ತೆ ನಾನು ಈ ದೇಶದಲ್ಲಿ ಜನ್ಮ ತಾಳಿ, ಈ ಪುಣ್ಯ ಭೂಮಿಯಿಂದ ಬ್ರಿಟಿಷರ ವಿರುದ್ಧ ಹೋರಾಟವನ್ನು ಮುಂದುವರೆಸುವದಾಗಿದೆ ಹಾಗೂ ಬ್ರಿಟೀಷರನ್ನು ಹೊಡೆದೋಡಿಸಲು ಮನೆಗೊಬ್ಬ ರಾಯಣ್ಣ ಹುಟ್ಟಲಿ" ಎಂದು ಹೇಳಿದ್ದಾನೆ. ಹಿನ್ನೆಲೆ. ರಾಯಣ್ಣನಿಗೆ, ರಾಯ ನಾಯಕ, ವೀರ ಸಂಗೊಳ್ಳಿ ರಾಯಣ್ಣ, ಶೂರ ರಾಯಣ್ಣ ಧೀರ ರಾಯಣ್ಣ, ಕ್ರಾಂತಿವೀರ ರಾಯಣ್ಣ ಇತ್ಯಾದಿ ದಾಖಲೆಗಳು ಜನಮನದಾಳದಿಂದ, ಜನಪದರಿಂದ ನಾಟಕಕಾರರಿಂದ, ಇತಿಹಾಸಕಾರರಿಂದ ರಾಯಣ್ಣನಿಗೆ ಹೆಸರಿಸಲ್ಪಟ್ಟಿವೆ. ಕಿತ್ತೂರಿನಿಂದ ಕೆಲವೇ ದೂರದಲ್ಲಿರುವ ಸಂಗೊಳ್ಳಿ ಗ್ರಾಮದಲ್ಲಿ ಭರಮಪ್ಪ ಮತ್ತು ಕೆಂಚವ್ವ ದಂಪತಿಯ ಎರಡನೆ ಪುತ್ರನಾಗಿ ರಾಯಣ್ಣ ಜನಿಸುತ್ತಾನೆ. ಇವರದು ಪ್ರಸಿದ್ಧ ಕುಟುಂಬ. ಇವರ ತಾತ ರಾಘಪ್ಪ ವೀರಪ್ಪ ದೇಸಾಯಿ ಯುದ್ಧದಲ್ಲಿ ತೋರಿದಂತಹ ಶೌರ್ಯಕ್ಕಾಗಿ ‘‘ಸಾವಿರ ಒಂಟೆ ಸರದಾರ’’ ಎಂಬ ಬಿರುದು ಇತ್ತು. ಇವರ ಮುತ್ತಜ್ಜ ಆಯುರ್ವೇದ ಪಂಡಿತರಾಗಿದ್ದರು. ರಾಯಣ್ಣನ ತಂದೆ ಭರಮಣ್ಣ ಮಹಾನ್ ಸಾಹಸಿ. ಜನರಿಗೆ ಕಾಟ ಕೊಡುತ್ತಿದ್ದ ಹೆಬ್ಬುಲಿಯನ್ನು ಹಿಡಿದು ಕೊಂದ ಕೀರ್ತಿ ಇವರದ್ದು. ಈ ಸಾಹಸಕ್ಕಾಗಿ ಆರಸರು ನೀಡಿದ ಹೊಲವೇ ರಕ್ತಮಾನ್ಯದ ಹೊಲ. ಸಂಗೊಳ್ಳಿಯಲ್ಲಿನ ಗರಡಿ ಮನೆ ಅತ್ಯಂತ ಪ್ರಸಿದ್ಧಿಯಿರುವ ಗರಡಿ. ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಆಗಸ್ಟ್‌೧೫ನೆಯ ದಿನ ೧೭೯೬, ಆಗಸ್ಟ ಹದಿನೈದು ಭಾರತೀಯರಿಗೆ ರಾಷ್ಟ್ರೀಯ ದೊರಕಿದ ದಿನವಾಗಿದೆ. ಭಾರತೀಯರಿಗೆ ರಾಷ್ಟ್ರೀಯ ಹಬ್ಬ. ರಾಯಣ್ಣನಿಗೆ ಮರಣದಂಡನೆಯಾಗಿ ಗಲ್ಲುಗಂಬಕ್ಕೇರಿದ ದಿನ ಜಾನೇವರಿ ೨೬ನೆಯ ದಿನ ೧೮೩೧; ಜಾನೇವರಿ ಇಪ್ಪತ್ತಾರು ಭಾರತೀಯರಿಗೆ ಸಂಪೂರ್ಣ ಸ್ವಾತಂತ್ಯ್ರದಿನ, ಪ್ರಜಾಸತ್ತಾತ್ಮಕ ದಿನ, ಭಾರತೀಯರಿಗೆ ರಾಷ್ಟ್ರೀಯ ಹಬ್ಬ. ಇವೆರಡು ದಿನಗಳು ಜನನ ಮರಣದವುಗಳು ರಾಯಣ್ಣನಿಗೆ ಮಾತ್ರವಲ್ಲ, ಭಾರತೀಯರಿಗೆ ರಾಷ್ಟ್ರೀಯ ಉತ್ಸವದ ದಿನಗಳಾಗಿವೆ. ಇಡೀ ಜೀವಮಾನ ಆಂಗ್ಲರನ್ನು ನಾಡಿನಿಂದ-ದೇಶದಿಂದ ಹೊರಹಾಕಲು ಮಾಡಿದ ಹೋರಾಟ (ಲಡಾಯಿ)ಗಳು ಸ್ಮರಣೀಯವಾಗಿವೆ. ಮೂವತ್ತೈದು ವರುಷ ಜನ್ಮದಾರಭ್ಯದಿಂದ ಸ್ವರ್ಗವಾಸಿಯಾಗುವವರೆಗೆ ತನ್ನ ಸರ್ವಸ್ವವನ್ನು ಕಿತ್ತೂರ ನಾಡಿನ ಸ್ವಾತಂತ್ಯ್ರಕ್ಕಾಗಿ ಅರ್ಪಣೆ ಮಾಡಿದವನು ಸಂಗೊಳ್ಳಿ ರಾಯಣ್ಣ. ಬ್ರಿಟೀಷರು ಸಂಗೊಳ್ಳಿ ರಾಯಣ್ಣನ ವಿಚಾರಣೆ ನಡೆಸಿ ಮರಣದಂಡನೆ ನೀಡಿದರು. ಆತನ ಜೊತೆ ಇತರ ಏಳು ಜನ ಅನುಯಾಯಿಗಳು ವಿಚಾರಣೆ ನಡೆಸಿ ಮರಣ ದಂಡನೆ ನೀಡಿದರು. ಆರು ಜನರಿಗೆ ಜೀವಾವಧಿ ಶಿಕ್ಷೆ ನೀಡಿ, ಸಮುದ್ರದಾಚೆಗೆ ಕಳಿಸಿದರು. ಅವರ ವಿವರ ಕೆಳಗಿನಂತಿದೆ. ಮರಣ ದಂಡನೆ ಶಿಕ್ಷೆಗೊಳಪಟ್ಟವರು. ೧. ರಾಯಣ್ಣ ೩೫ ೨. ಬಾಳಾ ನಾಯಕ ೫೦ ೩. ಬಸಲಿಂಗಪ್ಪ ೩೦ ೪. ಕರಬಸಪ್ಪ ೪೦ ೫. ಭೀಮಾ ಜಿಡ್ಡಿಮನಿ ೪೦ ೬. ಕೆಂಚಪ್ಪ ೩೦ ೭. ಅಪೂಜಿ ನಾಯಕ ೩೦ ಜೀವಾವಧಿ ಶಿಕ್ಷೆಗೊಳಪಟ್ಟು ಸಮುದ್ರದಾಚೆಗೆ ಕಳಿಸಲ್ಪಟ್ಟವರು. ೧.ರುದ್ರನಾಯಕ ೫೦ ೨. ಎಲ್ಲಾನಾಯಕ ೪೦ ೩. ಅಪ್ಪೂಜಿ ೪೦ ೪. ರಾಣಮೋಜಿಕೊಂಡ ೩೦ ೫. ಕೋನೇರಿ ೪೦ ೬. ನೇಮಣ್ಣ ೪೦ ಮರಣದ ನಂತರ. ಕತ್ತಿ ಚನ್ನಬಸವಣ್ಣ ಮಾರುವೇಷದಲ್ಲಿ ರಾಯಣ್ಣನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಇವನ ಸಮಾಧಿಯ ಮೇಲೆ ಆಲದ ಮರವೊಂದನ್ನು ನೆಟ್ಟ. ಅಂದು ನೆಟ್ಟ ಆಲದ ಮರ ಬೃಹದಾಕಾರವಾಗಿ ಬೆಳೆದು ಇಂದು ಪೂಜ್ಯ ಭಾವನೆಗಳಿಗೆ ಇಂಬು ನೀಡುವ ಪುಣ್ಯ ಸ್ಥಳವಾಗಿದೆ. ರಾಯಣ್ಣನ ನಿಸ್ವಾರ್ಥ ಹೋರಾಟ, ದೇಶಪ್ರೇಮ ಯುವಜನತೆಯಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ. ಇದ್ದರೆ ರಾಯಣ್ಣನಂತಹ ದೇಶಪ್ರೇಮಿಗಳಿರಬೇಕು ಎನ್ನುವುದು ಎಲ್ಲರ ಮಾತಾಗಿದೆ. ರಾಯಣ್ಣನ ದಂಡಿನಲ್ಲಿ ಸ್ಮರಿಸಬೇಕಾದ ಅತ್ಯಂತ ಮಹತ್ವದ ವಿಷಯವೆಂದರೆ ಒಕ್ಕಟ್ಟು ಉಂಟು ಮಾಡಿರುವ ಬಗೆಯನ್ನು ತಿಳಿಯುವುದು. ಚಲನಚಿತ್ರ. ರಾಯಣ್ಣನ ಬದುಕನ್ನು ಆಧರಿಸಿ ೧೯೬೭ರಲ್ಲಿ ಒಂದು ಚಿತ್ರ ನಿರ್ಮಾಣವಾಯ್ತು. ಮತ್ತೆ ೨೦೧೨ರಲ್ಲಿ ಸಂಗೊಳ್ಳಿ ರಾಯಣ್ಣ ಎಂಬ ಹೆಸರಿನಲ್ಲಿಯೇ ಮತ್ತೊಂದು ಅದ್ದೂರಿ ಚಿತ್ರವೂ ನಿರ್ಮಾಣವಾಯ್ತು. ಇದನ್ನು ನಿರ್ಮಿಸಿದವರು ಆನಂದ ಅಪ್ಪುಗೋಳ ಮತ್ತು ಇದನ್ನು ನಿರ್ದೇಶಿಸಿದವರು ನಾಗಣ್ಣ. ಈ ಚಿತ್ರದ ನಾಯಕರಾಗಿ ದರ್ಶನ್ ತೂಗುದೀಪ್ ಅಭಿನಯಿಸಿದ್ದಾರೆ.ತಾಯಿಯ ಪಾತ್ರದಲ್ಲಿ [ಶ್ರೀಮತಿ ಉಮಾಶ್ರೀಯವರು] ಮತ್ತು ಕಿತ್ತೂರು ಚೆನ್ನಮ್ಮನಾಗಿ ಜಯಪ್ರದಾ ಕೂಡಾ ಅಭಿನಯಿಸಿದ್ದಾರೆ.

Monday, 16 January 2017

ಲೋಕರೂಢಿ


ನೊಣಗಳು ನಮ್ಮ  ಸುಂದರವಾದ ಇಡೀ ದೇಹವನ್ನು ಬಿಟ್ಟು ಗಾಯದ ಮೇಲೆಯೇ ಕುಳಿತುಕೊಳ್ಳುವ ಹಾಗೆ
ಕೆಲವರು ನಮ್ಮಲ್ಲಿರುವ ಸದ್ಗುಣಗಳನ್ನು ತಳ್ಳಿಹಾಕಿ ಲೋಪದೋಷಗಳನ್ನು  ಮಾತ್ರ ಗಮನಿಸುತ್ತಾರೆ.
ಚಿಂತಿಸದಿರಿ,
ಹುಡುಕುವವರು ಏನಾದರೂ ಹುಡುಕಿಕೊಂಡು ಇರಲಿ ನಮಗೆ ನಮ್ಮತನದ ಅರಿವಿರಲಿ ನಮ್ಮ ಅಂತರಾಳ ಯಾವಾಗಲೂ ಒಳ್ಳೆಯದು ಬಯಸಲಿ.
                   ಯಲ್ಲಪ್ಪ ನಂದಿ.

ನುಡಿಗಳು


ನಮ್ಮವರ  ನುಡಿಗಳನ್ನು ಮೆಚ್ಚುವುದನ್ನು ಬಿಟ್ಟು, ಅನ್ಯ ಭಾಷಿಕರ ನುಡಿಗಳನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ.
ಬಿಲ್ ಗೇಟ್ಸ್, ಸ್ಟೀವ್ ಜಾಬ್ಸ್, ಐನ್ಸ್ಟೀನ್ ಹೇಳಿದ ಮಾತುಗಳನ್ನೇ ಉವಾಚ ಮಾಡುತ್ತಾ,
ಕನ್ನಡದಲ್ಲೇನಿದೆ ಎಂದು ಅಕಳಿಸುತ್ತಾರೆ.

ಕುವೆಂಪು , ಬೇಂದ್ರೆ, ಮಾಸ್ತಿ, ವಿಶ್ವೇಶ್ವರಯ್ಯರಂತಹ ಇನ್ನು ಹಲವಾರು ಮಹನಿಯರ ಪಾದಧೂಳಿಯಿಂದ ಪುನಿತವಾದ ನಾಡು ನಮ್ಮ ಕನ್ನಡ ನಾಡು. ಕನ್ನಡದಲ್ಲೇ ಕನ್ನಡಿಗರು ಆಡಿದ ನುಡಿಗಳ ಸಂಗ್ರಹ ಇಲ್ಲಿದೆ..

ಬನ್ನಿ ಇನ್ನಾದರೂ ನಮ್ಮ ಕನ್ನಡಿಗರ ಮಾತುಗಳನ್ನು ಬಳಸೋಣ

ಸರಳತನವು ಪರಿಪೂರ್ಣತೆಯ ಲಕ್ಷಣ – ಪಂಡಿತ ತಾರಾನಾಥ.

ಕೊರಬೇಡಿ , ನಿಲ್ಲಬೇಡಿ, ಇಳಿಯ ಬೇಡಿ , ಏರುತ್ತಾ ಇರಿ – ಮಾಸ್ತಿ ವೆಂಕಟೇಶ ಅಯ್ಯಂಗಾರ್.

ಉತ್ತಮವಾದುದು ಶ್ರಮವಿಲ್ಲದೆ ಲಭಿಸದು , ಇಚ್ಹೆಯಿಲ್ಲದಿದ್ದರಂತೂ ಅದು ಸಾಧ್ಯವೇ ಅಲ್ಲ – ಕುವೆಂಪು .

ಸತ್ಯಕ್ಕೆ ಹೆದರುವವನು ಅಥವಾ ನಾಚುವವನು ನಿಜವಾದ ಜಿಜ್ಞಾಸುವಾಗಲಾರನು- ಕುವೆಂಪು .

ಲೋಕವೆಲ್ಲಾ ಬಗ್ಗುವುದು ಶ್ರೇಷ್ಠವಾದ ಬುದ್ದಿಗೆ ತಾನೇ ? – ಬಿ ಎಂ ಶ್ರೀಕಂಠಯ್ಯ.

ಜ್ಞಾನಕ್ಕೆ ವಿದ್ಯೆಯೂ , ವಿದ್ಯೆಗೆ ಓದು ಬರಹವೂ ತಳಹದಿ – ಬಿ ಎಂ ಶ್ರೀಕಂಠಯ್ಯ.

ಎಂತಹ ಕಟು ಅನುಭವ ಪ್ರಸಂಗ ಬಂದರೂ ಎದೆಗುಂದಬಾರದು.ಇದೇ ಸುಖಿ ಆಗಿರೋ ರಹಸ್ಯ.- ದಾ ರಾ ಬೇಂದ್ರೆ

ಬುದ್ದಿಯ ಜ್ಞಾನ ಬೇರೆ , ಹೃದಯದ ಜ್ಞಾನ ಬೇರೆ – ಜಿ ಪಿ ರಾಜರತ್ನಂ

ಅಪ್ರಿಯವಾದರು ಸತ್ಯವನ್ನು ಹೇಳಬೇಕಾದುದು ಹಿತೈಷಿಯ ಧರ್ಮ – ಅನಕೃ

ಹೋದ ಐಶ್ವರ್ಯ ಸಿಗಬಹುದು, ಹೋದ ಹೊತ್ತು ಸಿಗುವುದಿಲ್ಲ – ಅನಕೃ

ಮಾನವ ಭೂಮಿಯ ಮೇಲೆ ಇದ್ದುಕೊಂಡು ಸ್ವರ್ಗವನ್ನು ಗೆಲ್ಲುವ ಸಾಧನೆ ಮಾಡಬೇಕು – ವಿನಾಯಕ ಕೃಷ್ಣ ಗೋಕಾಕ

ಮರ್ತ್ಯದಲ್ಲಿ ನಿಂತು ಗೆಲ್ಲು, ಮರ್ತ್ಯವೇ ಒರೆಗಲ್ಲು .- ವಿನಾಯಕ ಕೃಷ್ಣ ಗೋಕಾಕ

ಪ್ರಾಣಿ ಜೀವನ ಮಿತವಾದದು , ಮನುಷ್ಯ ಜೀವನ ಬಹುಮುಖವಾದದು – ಶಿವರಾಮ ಕಾರಂತ

ಜನಾಂಗವನ್ನು ಶ್ರೇಷ್ಠ ಮಾಡುವುದಕ್ಕೆ ಒಂದೇ ದಾರಿ . ಜನರನ್ನು ಶ್ರೇಷ್ಠ ಮಾಡಬೇಕು – ಸರ್ ಎಂ ವಿಶ್ವೇಶ್ವರಯ್ಯ

ಹೆಚ್ಚು ಹೆಚ್ಚಾಗಿ ದುಡಿ — ಸರ್ ಎಂ ವಿಶ್ವೇಶ್ವರಯ್ಯ

ದುಡಿಮೆಗೆ ಗುರಿಯಿರಲಿ , ದುಡಿಯುವುದರಲ್ಲಿ ನಿಯಮವಿರಲಿ – ಸರ್ ಎಂ ವಿಶ್ವೇಶ್ವರಯ್ಯ

ನಿನ್ನ ದುಡಿಮೆಯಲ್ಲಿ ನೀನು ದಕ್ಷನಾಗು – ಸರ್ ಎಂ ವಿಶ್ವೇಶ್ವರಯ್ಯ

ದುಡಿಮೆಯಲ್ಲಿ ಸೇವಾ ಬುದ್ದಿಯಿರಲಿ – ಸರ್ ಎಂ ವಿಶ್ವೇಶ್ವರಯ್ಯ

ಇನ್ನೊಬ್ಬನ ಹುಚ್ಚುತನ ನಮಗೆ ಕಾಣಿಸುವಷ್ಟು ಸುಲಭವಾಗಿ , ನಮ್ಮದೇ ಹುಚ್ಚುತನ ನಮಗೆ ಕಾಣಿಸುತ್ತದೆಯೇ ? – ಶಿವರಾಮ ಕಾರಂತ

ಸತ್ಯ ದರ್ಶನವಾಗಬೇಕು ಎಂದರೆ ಅಹಂಕಾರ ವಿಸರ್ಜನೆಯಾಗಬೇಕು.- ತ ರಾ ಸುಬ್ಬರಾವ್

ತಾನು ಆಚರಿಸದೆ ಮತ್ತೊಬ್ಬರು ಮಾತ್ರ ಆಚರಿಸಬೇಕೆಂದು ದ್ವಿವಿಧವಾದುದು ಎಂದು ಧರ್ಮವೆನಿಸಿಕೊಳ್ಳುವುದಿಲ್ಲ – ತ ರಾ ಸುಬ್ಬರಾವ್

ನಾವು ಹುಟ್ಟಿದ ಸಮಾಜಕ್ಕೆ ಸಲ್ಲಿಸಬೇಕಾದ ಋಣ ಸಮಾಜ ಸೇವೆ – ಟಿ ಪಿ ಕೈಲಾಸಂ

ಏನಾದರು ಮಾಡುತಿರು ತಮ್ಮ ಸುಮ್ಮನಿರಬೇಡ – ಗೋಪಾಲ ಕೃಷ್ಣ ಅಡಿಗ

ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ -ಅಡಿಗರು

ತಾಯಿ ಇಲ್ಲದ ತವರಿಗೆ ಮಗಳು ಬಂದರೆ ಉರಿಬೇಸಗೆಯಲ್ಲಿ ಮರಳು ಗಾಡಿಗೆ ಬಂದಂತೆ.- ಅನಕೃ

ಕಾಲವನ್ನು ನಾವು ಪಾಲಿಸಿದರೆ ಅದು ನಮಗೆ ವಿಧೇಯವಾಗಿರುತ್ತದೆ.–ಸರ್ ಎಂ.ವಿ

ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ — ಟಿ.ಪಿ.ಕೈಲಾಸಂ

ವಿದ್ಯಾರ್ಥಿ ಭತ್ತ ಬೆಳೆಯುವ ಗದ್ದೆಗಳಾಗಬೇಕು, ಬರಿಯ ಚೀಲಗಳಾಗಬಾರದು-— ಕುವೆಂಪು

ಮಾತು ಮನಸ್ಸುಗಳನ್ನು ಒಂದುಗೂಡಿಸಬೇಕೆ ಹೊರತು ಒಡೆಯಬಾರದು— ಮಾಸ್ತಿ

ಇವತ್ತಿನ ಹಾರೈಕೆ, ನಾಳಿನ ಪೂರೈಕೆ, ಇಂದಿನ ಕನಸು, ನಾಳೆಯ ನನಸು— ಕುವೆಂಪು

ನೀತಿಯ ನೆಲೆಗಟ್ಟಿಲ್ಲದ ವಾದವು ಮಾತಿನ ವ್ಯಭಿಚಾರ – ಎಸ್ ಎಲ್ ಭ್ಯರಪ್ಪ

                        ಯಲ್ಲಪ್ಪ ನಂದಿ

ವಿಚಿತ್ರ ಪ್ರಪಂಚದ ಕಠೋರ ಸತ್ಯ


ಮದುವೆ ಮೆರವಣಿಗೆಯಲ್ಲಿ ವರ ಹಿಂದಿದ್ದರೆ ಲೋಕವೇ ಅವನ ಮುಂದೆ ಸಾಗುತ್ತದೆ, ಅಂತಿಮ ಯಾತ್ರೆಯಲ್ಲಿ ಶವ ಮುಂದಿದ್ದರೆ ಲೋಕವೇ ಹಿಂದೆ ಸಾಗುತ್ತದೆ,ಅಂದರೆ ಖುಷಿಯಲ್ಲಿ ಮುಂದಿದ್ದರೆ ದುಃಖದಲ್ಲಿ ಹಿಂದಿರುತ್ತಾರೆ.

ಮೇಣದ ಬತ್ತಿ ಹಚ್ಚಿ ತೀರಿ ಹೋದವರ ನೆನೆಯುತ್ತಾರೆ, ಮೇಣದ ಬತ್ತಿ ಆರಿಸಿ ಜನ್ಮದಿನ ಆಚರಿಸುತ್ತಾರೆ.
ವಾಹ್ ಎಂಥ ಪ್ರಪಂಚ!

ಮನೆ ಸುಟ್ಟರೆ ವಿಮಾ ತಗೊಬಹುದು ಕನಸುಗಳು ಸುಟ್ಟರೆ ಏನು ಮಾಡೋಣ?

ಆಕಾಶದಿಂದ ಮಳೆ ಸುರಿದರೆ ಛತ್ರಿ ಹಿಡಿಬಹುದು ಕಣ್ಣಿಂದ ಹನಿ ಸುರಿದರೆ ಏನು ಮಾಡೋಣ?

ಸಿಂಹ ಘರ್ಜಿಸಿದರೆ ಓಡಿಹೋಗಬಹುದು ಅಹಂಕಾರ ಘರ್ಜಿಸಿದರೆ ಏನು ಮಾಡೋಣ?

ಮುಳ್ಳು ಚುಚ್ಚಿದರೆ ತಗೆಯಬಹುದು ಯಾವುದೋ ಮಾತು ಚುಚ್ಚಿದರೆ ಏನು ಮಾಡೋಣ?

ನೋವು ಆದರೆ ಔಷಧಿ ತೊಗೊಬಹುದು ವೇದನೆ ಆದರೆ ಏನು ಮಾಡೋಣ?  

ಒಬ್ಬ ಒಳ್ಳೆಯ ಮಿತ್ರ ಒಂದೊಳ್ಳೆ ಔಷಧೀಯ ಹಾಗೆ ಆದರೆ ಒಂದೊಳ್ಳೆ ಗೆಳೆಯರ ಬಳಗ ಒಂದು ಪೂರ್ತಿ ಔಷಧ ಅಂಗಡಿ ಇದ್ದ ಹಾಗೆ.

ಗೆಳೆಯರನ್ನ ಗೆಳೆತನವನ್ನ ಬೆಳೆಸಿ ಪ್ರೀತಿಸಿ ಹಾಗೂ ಹರಸಿ ಯಲ್ಲಪ್ಪ ನಂದಿ

ವಿಚಾರ


ಹಣ್ಣುತುಂಬಿದ ಮರಗಳು ಬಾಗುತ್ತವೆ, ಬೋಳು ಮರ ನೆಟ್ಟಗೆ ನಿಂತಿರುತ್ತದೆ,

ನೀರು ತುಂಬಿದ ಕಾರ್ಮೋಡಗಳು ನೆಲಕ್ಕೆ ಬರುತ್ತವೆ,ಬಿಳಿ ಮೋಡಗಳು ಹಾರಿಹೋಗುತ್ತವೆ,

ಹಾಲು ತುಂಬಿದ ಹಸು ಸಾಧುವಾಗಿರುತ್ತದೆ, ಹಾಲಿಲ್ಲದ ದನ ಪುಂಡುತನ ಮಾಡುತ್ತದೆ,

ಸಿಹಿ ನೀರು ತುಂಬಿದ ಕೊಳ ಮೌನವಾಗಿರುತ್ತದೆ, ಉಪ್ಪು ನೀರಿನ ಸಮುದ್ರ ಗರ್ಜಿಸುತ್ತದೆ,

ಅಜ್ಞಾನಿ ಹರಟೆ ಹೊಡೆಯುತ್ತಾನೆ, ಜ್ಞಾನಿ ಮೌನವಾಗಿರುತ್ತಾನೆ.

ಶವ ಮುಟ್ಟಿದರೆ ಸ್ನಾನ ಮಾಡುತ್ತೀಯ,ಆದರೆ ಮೂಕ ಪ್ರಾಣಿಯ ಹೊಡೆದು ತಿನ್ನುತ್ತೀಯ|

ಈ ಮಂದಿರ ಮಸೀದಿಗಳು ಎಂತಹ ಅದ್ಭುತ ಸ್ಥಳಗಳು,ಅಲ್ಲಿ ಹೊರಗೆ ಬಡವ ಹಾಗೂ ಒಳಗೆ ಶ್ರೀಮಂತ ಭಿಕ್ಷೆ ಬೇಡುತ್ತಾನೆ.

 ಯಲ್ಲಪ್ಪ ನಂದಿ.


ಸ್ನೇಹ - ಒಂದು ಆತ್ಮ ಎರಡು ಮನಸ್ಸು

ಸ್ನೇಹ ಬೆತ್ತಲೆ
ಹೋಗಲಾಡಿಸುವುದು ಮನದ ಕತ್ತಲೆ
ಸ್ನೇಹ ಆಗಸದೆತ್ತರಕೆ ಏರಲು ನೆರವಾಗುವ ಮೋಡದ ಕೈ 
ಜಾರಿ ಬಿದ್ದರೆ ಕಾಪಾಡುವ ಭೂತಾಯಿಯ ಅಂಗೈ
ಕಂಡ ಕನಸಿಗೆ ಸ್ನೇಹ ಕನ್ನಡಿ
ನೊಂದ ಮನಸಿಗೆ ಸ್ನೇಹ ಸಾಂತ್ವನದ ಮುನ್ನುಡಿ
ತಪ್ಪು ದಾರಿಗೆ ಸ್ನೇಹ ಸನ್ಮಾರ್ಗದ ದಾರಿದೀಪ
ಸಂತಸದ ಸಂಭ್ರಮಕೆ ಸ್ನೇಹ ಸಪ್ತಸಾಗರ
ಒಂದೇ ಆತ್ಮದ ಎರಡು ಮನಸ್ಸು ಸ್ನೇಹ
ಎರಡು ಮನಸ್ಸಿನ ಒಂದೇ ಕನಸು ಸ್ನೇಹ
ಬೇಕಂದಾಗ ಸಹಾಯ ಮಾಡುವ ಸ್ನೇಹ ಹಸ್ತ
ದಣಿವಾದಾಗ ನೆರಳು ನೀಡುವ ಸ್ನೇಹ ವ್ರಕ್ಷ
ಸ್ನೇಹ ಬೆತ್ತಲೆ
ಹೋಗಲಾಡಿಸುವುದು ಮನದ ಕತ್ತಲೆ...
ನಿಮ್ಮ ಸ್ನೇಹಿತ ಯಲ್ಲಪ್ಪ ನಂದಿ.

Wednesday, 11 January 2017

ಸಫಲ ಸಂವಹನಕ್ಕೆ ಸಲಹೆಗಳು

ಮಾತನಾಡುವಾಗ ತಾಯಿಯೊಂದಿಗೆ ಮಮತೆಯಿಂದ ಮಾತನಾಡಿ

ತಂದೆಯೊಂದಿಗೆ ಗೌರವದಿಂದ ಮಾತನಾಡಿ

ಗುರುವಿನೊಂದಿಗೆ ವಿನಮ್ರತೆಯಿಂದ ಮಾತನಾಡಿ

ಪತ್ನಿಯೊಂದಿಗೆ ಸತ್ಯವಾಗಿ ಮಾತನಾಡಿ ಸಹೋದರರೊಂದಿಗೆ ಸಂಯಮದಿಂದ ಮಾತನಾಡಿ

ಸಹೋದರಿಯೊಂದಿಗೆ ಪ್ರೀತಿಯಿಂದ ಮಾತನಾಡಿ

ಮಕ್ಕಳೊಂದಿಗೆ ಉತ್ಸಾಹದಿಂದ ಮಾತನಾಡಿ

ಸಂಭಂದಿಕರೊಂದಿಗೆ ಪರಾನುಭೂತಿಯಿಂದ ಮಾತನಾಡಿ

ಸ್ನೇಹಿತರೊಂದಿಗೆ ಮುಕ್ತವಾಗಿ ಮಾತನಾಡಿ

ಅಧಿಕಾರಿಗಳೊಂದಿಗೆ ನಯವಾಗಿ ಮಾತನಾಡಿ

ವ್ಯಾಪಾರಿಗಳೊಂದಿಗೆ ಕಟ್ಟುನಿಟ್ಟಾಗಿ ಮಾತನಾಡಿ

ಗ್ರಾಹಕರೊಂದಿಗೆ ಪ್ರಾಮಾಣಿಕವಾಗಿ ಮಾತನಾಡಿ

ಕೆಲಸಗಾರರೊಂದಿಗೆ ಸೌಜನ್ಯದಿಂದ   ಮಾತನಾಡಿ

ರಾಜಕಾರಣಿಗಳೊಂದಿಗೆ ಎಚ್ಚರಿಕೆಯಿಂದ ಮಾತನಾಡಿ

ದೇವರೊಂದಿಗೆ ಮೌನವಾಗಿ ಮಾತನಾಡಿ.

       ಯಲ್ಲಪ್ಪ ನಂದಿ.

ಆರೋಗ್ಯದ ಓಳಿತಿಗಾಗಿ


ಬಿಕ್ಕಳಿಕೆ ಬರುವುದೇ  ಹುರುಳಿ ಕಷಾಯ ಸೇವಿಸಿರಿ.

ಕಫ ಬರುವುದೇ  ಶುಂಠಿ ಕಷಾಯ ಸೇವಿಸಿರಿ.

ಹೊಟ್ಟೆಯಲ್ಲಿ ಹರಳಾದರೇ ಬಾಳೆದಿಂದಿನ ಪಲ್ಯ ಸೇವಿಸಿರಿ.

ತೊದಲು ನುಡಿಯುತ್ತಿದ್ದರೆ  ಮೃತ್ಯುಂಜಯ ಮಂತ್ರ ಹೇಳಿರಿ.

ಬಿಳಿ ಕೂದಲೇ  ಮೂಗಿನಲ್ಲಿ ಬೇವಿನ ಎಣ್ಣೆ ಹಾಕಿರಿ.

ಮರೆವು ಬರುವುದೇ  ನಿತ್ಯ ಸೇವಿಸಿ ಜೇನು.

ಕೋಪ ಬರುವುದೇ  ಕಾಳು ಮೆಣಸು ಸೇವಿಸಿ.

ಮೂಲವ್ಯಾಧಿಯೇ  ನಿತ್ಯ ಸೇವಿಸಿ ಎಳ್ಳು.

ಮುಪ್ಪು ಬೇಡವೇ ಗರಿಕೆ ರಸ ಸೇವಿಸಿ.

ನಿಶಕ್ತಿಯೇ  ದೇಶಿ ಆಕಳ ಹಾಲು ಸೇವಿಸಿ.

ಇರುಳುಗಣ್ಣು ಇದೆಯೇ  ತುಲಸಿ ರಸ ಕಣ್ಣಿಗೆ ಹಾಕಿ.

ಕುಳ್ಳಗಿರುವಿರೇ ನಿತ್ಯ ಸೇವಿಸಿ ನಿಂಬೆ ಹಣ್ಣು.

ತೆಳ್ಳಗಿರುವಿರೆ  ನಿತ್ಯ ಸೇವಿಸಿ ಸೀತಾ ಫಲ.

ತೆಳ್ಳಗಾಗಬೇಕೇ  ನಿತ್ಯ ಸೇವಿಸಿ ಬಿಸಿ ನೀರು.

ಹಸಿವಿಲ್ಲವೇ  ನಿತ್ಯ ಸೇವಿಸಿ ಓಂ ಕಾಳು.

ತುಂಬಾ ಹಸಿವೇ  ಸೇವಿಸಿ ಹಸಿ ಶೇಂಗಾ.

ಬಾಯಾರಿಕೆಯೇ  ಸೇವಿಸಿ ತುಳಸಿ.

ಬಾಯಾರಿಕೆ ಇಲ್ಲವೇ  ಸೇವಿಸಿ ಬೆಲ್ಲ.

ಸಕ್ಕರೆ ಕಾಯಿಲೆಯೇ  ಬಿಡಿ ಸಕ್ಕರೆ ಸೇವಿಸಿ ರಾಗಿ.

ಸಾರಾಯಿ ದಾಸರೇ  ಗೋಸೇವೆ ಮಾಡಿ ಗೋಮೂತ್ರ ಸೇವಿಸಿ.

ರಕ್ತ ಹೀನತೆಯೇ  ನಿತ್ಯ ಸೇವಿಸಿ ಪಾಲಕ್ ಸೊಪ್ಪು.

ತಲೆ ಸುತ್ತುವುದೇ  ಬೆಳ್ಳುಳ್ಳಿ ಕಷಾಯ ಸೇವಿಸಿ.

ದೃಷ್ಟಿ ದೋಷವೇ  ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿ ನಿತ್ಯ ಸೇವಿಸಿ ಕಿರುಕಸಾಲಿ.

ಬಂಜೆತನವೇ  ಔದುಂಬರ ಚಕ್ಕೆ ಕಷಾಯ ಸೇವಿಸಿ.

ಭಯವೇ  ಗೋಮೂತ್ರ ಸೇವಿಸಿ.

ಸ್ವಪ್ನ ದೋಷವೇ ತುಳಸಿ ಕಷಾಯ ಸೇವಿಸಿ.

ಅಲರ್ಜಿ ಇದೆಯೇ  ಅಮೃತ ಬಳ್ಳಿ ಕಷಾಯ ಸೇವಿಸಿ.

ಹೃದಯ ದೌರ್ಬಲವೇ ಸೋರೆಕಾಯಿ ರಸ ಸೇವಿಸಿ.

ರಕ್ತ ದೋಷವೇ  ಕೇಸರಿ ಹಾಲು ಸೇವಿಸಿ.

ದುರ್ಗಂಧವೇ  ಹೆಸರು ಹಿಟ್ಟು ಸ್ನಾನ ಮಾಡಿ.

ಕೋಳಿ ಜ್ವರಕ್ಕೆ  ತುಳಸಿ,ಅಮೃತ ಬಳ್ಳಿ ಕಷಾಯ ಸೇವಿಸಿ.

ಕಾಲಲ್ಲಿ ಆಣಿ ಇದೆಯೇ  ಉತ್ತರಾಣಿ ಸೊಪ್ಪು ಕಟ್ಟಿರಿ.

ಮೊಣಕಾಲು ನೋವು  ನಿತ್ಯ ಮಾಡಿ ವಜ್ರಾಸನ.

ಸಂಕಟ ಆಗುವುದೇ  ಎಳನೀರು ಸೇವಿಸಿ.

ಮಗು ಹಾಸಿಗೆಯಲ್ಲಿ ಮೂತ್ರ ಮಾಡುವುದೇ  ನಿತ್ಯ ಕೊಡಿ ಜೇನು.

ಜಲ ಶುದ್ಧಿ : ಮಾಡಬೇಕೇ  ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ತುಳಸಿ ಎಲೆ ಹಾಕಿರಿ.

ವಾಂತಿಯಾಗುವುದೇ  ಎಳನೀರು-ಜೇನು ಸೇವಿಸಿ.

ಭೇದಿ ತುಂಬಾ ಆಗುವುದೇ  ಅನ್ನ ಮಜ್ಜಿಗೆ ಊಟ ಮಾಡಿ.

ಜಿಗುಪ್ಸೆ ಆಗಿದೆಯೇ  ಪ್ರಾಣಾಯಾಮ ಮಾಡಿ.

ಹಲ್ಲು ಸಡಿಲವೇ ದಾಳಿಂಬೆ ಸಿಪ್ಪೆಯ ಕಷಾಯ ಸೇವಿಸಿ.

ಕಾಮಾಲೆ ರೋಗವೇ  ನಿತ್ಯ ಮೊಸರು ಸೇವಿಸಿ.

ಉಗುರು ಸುತ್ತು ಇದೆಯೇ  ನಿಂಬೆ ಹಣ್ಣಿನ ಒಳಗೆ ಬೆರಳು ಇಡಿ.

ಎದೆ ಹಾಲಿನ ಕೊರತೆಯೇ ನಿತ್ಯ ಸೇವಿಸಿ ಎಳ್ಳು.

ಎಲುಬುಗಳ ನೋವೇ  ನಿತ್ಯ ಸೇವಿಸಿ ಮೆಂತ್ಯೆ ಬೆಳ್ಳುಳ್ಳಿ.


          ಯಲ್ಲಪ್ಪ ನಂದಿ


ಮನ ಮುಟ್ಟುವ ನುಡಿಮುತ್ತುಗಳು ನನ್ನ ಮನಮುಟ್ಟಿದ ಸಾಲುಗಳು



01. "ಎಲ್ಲಾ ಬೆರಳುಗಳೂ ಒಂದೇ ರೀತಿಯ ಅಳತೆಯನ್ನು
        ಹೊಂದಿಲ್ಲ.ಆದರೆ ಅವು ಬಗ್ಗಿ ನಿಂತರೆ ಎಲ್ಲವೂ ಒಂದೇ
        ಸಮನಾದೀತು. ಬದುಕಿನಲ್ಲೂ ಹಾಗೆ ನಾವು
        ಬಾಗುವುದಾದರೆ ಮತ್ತು ಸನ್ನಿವೇಶಗಳಿಗೆ
        ಹೊಂದಿಕೊಳುವುದಾದರೆ ಬದುಕು ತುಂಬಾ ಸರಳ"
                         ●●●●●●●
02. "ಜೀವನದ ಎಲ್ಲಾ ಕ್ಷಣಗಳೂ ನಿಮಗೆ ಸಂತೋಷದಾಯಕ
        ಆಗಲಾರದು. ದಿನದ ಎಲ್ಲಾ ಘಟನೆಗಳು ನಿಮಗೆ
        ಸಮಧಾನವೆನಿಸಲಾರದು. ಆದರೆ ಒಂದು ಸಂಗತಿ ಮಾತ್ರ
        ನಿಮಗೆ ಅತ್ಯಂತ ಖುಷಿಯೆನಿಸುವುದು. ಅದು
        ಯಾವುದೆಂದರೆ ಬೇರೆಯವರ ಕಣ್ಣುಗಳಲಿ ನೀವು ಕಾಣುವ
        ನಿಮ್ಮ ಬಗೆಗಿನ ಕಾಳಜಿ"
                         ●●●●●●●

03. "ಕಾಲಿಗೆ ಬೂಟುಗಳಿಲ್ಲವೆಂದು ನಾನು ಅಳುತ್ತಿದ್ದೆ. ಆದರೆ
        ಕಾಲುಗಳೇ ಇಲ್ಲದ ವ್ಯಕ್ತಿಯನು ಕಂಡಾಗ ನಾನು
        ಅಳುವುದನ್ನು ನಿಲ್ಲಿಸಿಬಿಟ್ಟೆ. ಬದುಕು ಆಶೀರ್ವಾದಗಳ
         ಸಂತೆ. ನಾವು ಅದನ್ನು ಅರ್ಥ ಮಾಡಿಕೊಳ್ಳಬೇಕು"
                         ●●●●●●●
04. "ಯಾರಾದರೂ ಬಹು ಬೇಗ ಸತ್ತುಹೋದರೆ ದೇವರು
        ಅವನನ್ನು ತುಂಬಾ ಪ್ರೀತಿಸುತ್ತಾನೆಂದು ಜನ ಅಭಿಪ್ರಾಯ
        ಪಡುತ್ತಾರೆ. ಆದರೆ ಭೂಮಿಯ ಮೇಲೆ ಇನ್ನೂ
        ಬದುಕಿದ್ದೇವೆಂದರೆ ಏನರ್ಥ?
        ಈ ಭೂಮಿಯ ಮೇಲೆ ಯಾರೋ ದೇವರಿಗಿಂತ ನಮ್ಮನ್ನು
        ಹೆಚ್ಚಾಗಿ ಪ್ರೀತಿಸುತ್ತಾರೆ ಎಂದರ್ಥ"
                         ●●●●●●●
05. "ನೋವುಂಡ ಹೃದಯ ಸಣ್ಣ ಮಕ್ಕಳಂತೆ. ಅದು ಅಳಬಹುದೇ
        ಹೊರತು ತನ್ನ ಭಾವನೆಗಳನು ಹಂಚಿಕೊಳ್ಳದು .ಆದ್ದರಿಂದ
        ನಿಮ್ಮನ್ನು ಪ್ರೀತಿಸುವ ಮತ್ತು ನಿಮ್ಮ ಮೇಲೆ ಕಾಳಜಿ
        ತೋರುವ ಯಾರನ್ನು ನೋಯಿಸಬೇಡಿ"...
                         ●●●●●●●
06. "ಒಳ್ಳೆಯ ರಸ್ತೆ ಒಬ್ಬ ಒಳ್ಳೆಯ ಚಾಲಕನನ್ನು ರೂಪಿಸಲಾರದು.
        ಶಾಂತವಾಗಿರುವ ಸಾಗರ ಒಬ್ಬ ಒಳ್ಳೆಯ ನಾವಿಕನನು
        ರೂಪಿಸಲಾರದು. ತಿಳಿಯಾದ ಆಕಾಶ ಒಬ್ಬ ಒಳ್ಳೆಯ
        ವಿಮಾನ ಚಾಲಕನನ್ನು ರೂಪಿಸಲಾರದು. ಸಮಸ್ಯೆಗಳೇ
        ಇಲ್ಲದ ಜೀವನ ಎಂದಿಗೂ ಸಾಧಕರನು ರೂಪಿಸದು"
                         ●●●●●●●
07. "ಸಮಯ ನಮಗಾಗಿ ಕಾಯುವುದಿಲ್ಲ ಎಂದಾದರೆ ನಾವೇಕೆ
        ಯೋಗ್ಯ ಸಮಯಕ್ಕಾಗಿ ಯಾವಾಗಲೂ ಕಾಯಬೇಕು?
        ಒಳ್ಳೆಯ ಕೆಲಸ ಮಾಡುವುದಕೆ ಯಾವಾಗಲೂ ಕೆಟ್ಟ
        ಸಮಯ ಎಂದಿರುವದಿಲ್ಲ"

                    ಯುವರಾಜ ನಂದಿ
                      ●●●●●●

ಪ್ರತಿಫಲ


ಕೋಪದಿಂದ ಮಾತನಾಡಿದರೆ ಗುಣವನ್ನು ಕಳೆದುಕೊಳ್ಳುವೆ,
ಹೆಚ್ಚಾಗಿ ಮಾತನಾಡಿದರೆ "ಶಾಂತಿ"ಯನ್ನು ಕಳೆದುಕೊಳ್ಳುವೆ,​
ಅನಗತ್ಯವಾಗಿ ಮಾತನಾಡಿದರೆ ಕೆಲಸವನ್ನು ಕಳೆದುಕೊಳ್ಳುವೆ​,​
ಅಹಂಕಾರದಿಂದ ಮಾತನಾಡಿದರೆ ಪ್ರೀತಿಯನ್ನು ಕಳೆದುಕೊಳ್ಳುವೆ,​
ಸುಳ್ಳು ಸುಳ್ಳು ಮಾತನಾಡಿದರೆ ಹೆಸರು ಕಳೆದುಕೊಳ್ಳುವೆ​,​
ವೇಗವಾಗಿ ಮಾತನಾಡಿದರೆ ಅರ್ಥವನ್ನು ಕಳೆದುಕೊಳ್ಳುವೆ,​
ಪ್ರೀತಿಯಿಂದ ಮಾತನಾಡಿದರೆ ಎಲ್ಲವನ್ನು ಗಳಿಸಿಕೊಳ್ಳುವೆ.

ಯಲ್ಲಪ್ಪ ನಂದಿ.

ಪ್ರೀತಿ ವೈಫಲ್ಯದ ಸಮಯ


ಹೋಗೇಲೆ ಲವ್ ಮಾಡ್ತೀನಿ ಅಂತ ಬಂದೋಳು
ನೀನೆ ಬಿಟ್ಟೋದೋಳು ನೀನೆ ಗ್ಲಾಸ್ ಅಲ್ಲಿ ಟೀ
ಕುಡಿಯೋ ನಿಂಗೆ ಇಷ್ಟಿರಬೇಕಾದ್ರೆ ಬಾಟ್ಲಲ್ಲಿ
ಬಿಯರ್ ಕುಡಿಯೋ ನಂಗೆಷ್ಟು
ಇರ್ಬೇಕು,ಮೊಬೈಲ್ ಕಳೆದೋದ್ರೆ ಹೊಸ
ಮೊಬೈಲ್ ತಗೋತಿವಿ..ಹುಡುಗಿ ಬಿಟ್ಟೋದ್ರೆ
ಬಾರ್ ಬಾಗಲು ತಟ್ಟುತ್ತೀವಿ ಅಂದ್ಕೋಬೇಡ
ನೋ ತಟ್ಟಿದ್ರು ಕೊನೇಗ್ ಒಂದಿನ.....ಅಪ್ಪ
ಅಮ್ಮ ತೋರ್ಸೋ 1000 ಜನ ಹುಡುಗೀರಲ್ಲಿ
ನಿಂಗಿಂತ ಒಂದ್ ಇಂಚು ಒಳ್ಳೆ ಹುಡ್ಗಿಗೆ ತಾಳಿ
ಕಟ್ಟೋ ತಾಕತ್ ನಂಗು ಇದೆ ಹೋಗೆ.........


ಯಲ್ಲಪ್ಪ ನಂದಿ.

ಪ್ರೀತಿಯ ಆಳ


ಪ್ರೀತಿ ಎರಡಕ್ಷರದ ಪದ
ಬ್ರಮ್ಮಾಂಡವಾದ ಶಕ್ತಿ
ವಿಚಿತ್ರವಾದ ಭ್ರಮನಿ
ದೈಹಿಕ ಸಾಂಗತ್ಯ
ಜಾತಿ ಬೇದಗಳಿಲ್ಲದ ದರ್ಮ
ಸ್ವಚ್ಚ ಸಂಭಂದ
ಜನ್ಮ ಜನ್ಮಗಳ ಅನುಬಂಧ
ಬೃಹತ ನಂಬಿಕೆ
ಹೃದಯಗಳ ಹಾಡುಗಾರಿಕೆ
ಮೋಕ ವೇದನೆ
ವಿರಹದ ನೋವು
ವಿರಹದ ಕಾತರ
ಭಾವನೆಗಳ ಸಾಕಾರ
ಒಲಾವಿನ ಸಾಕ್ಷಾತ್ಕಾರ
ಇದು ಒಬ್ಬರಿಗೆ ಒಬ್ಬರಿಗೆ ಆಳವಾಗಿ ಮಾಡಿ ಬಿಡುತ್ತೆ.


 ಯುವರಾಜ ನಂದಿ.

ಜೀವನದ ಬಗ್ಗೆ ಬರಹಗಳು


ಹುಟ್ಟು ನಾವು ಕೇಳದೇ ಸಿಗುವ ವರ.
ಸಾವು ನಾವು ಹೇಳದೇ ಹೋಗುವ ಜಾಗ.
ಬಾಲ್ಯ ಮೈಮರೆತು ಆಡುವ ಸ್ವರ್ಗ.
ಯೌವನ ಅರಿವಿದ್ದರೂ ಅರಿಯದ ಮಾಯೆ.
ಮುಪ್ಪು ಕಡೆಯ ಆಟ.
ಸ್ನೇಹ ಶಾಶ್ವತವಾಗಿ ಉಳಿಯೋ ಬಂಧ.
ಪ್ರೀತಿ ಪ್ರಾಣಕ್ಕೆ ಹಿತವಾದ ಅನುಬಂಧ.
ಪ್ರೇಮ ತ್ಯಾಗಕ್ಕೆ ಸ್ಪೂರ್ತಿ.
ಕರುಣೆ ಕಾಣುವ ದೇವರು.
ಮಮತೆ ಕರುಳಿನ ಬಳ್ಳಿ.
ದ್ವೇಷ ಉರಿಯುವ ಕೊಳ್ಳಿ.
ತ್ಯಾಗ ದೀಪ.
ಉಸಿರು ಮೌನದಲೆ ಜೊತೆಗಿರುವ ಗೆಳೆಯ.
ಹ್ರದಯ ಎಚ್ಚರಿಕೆ ಗಂಟೆ.
ಕಣ್ಣು ಸ್ರಷ್ಟಿಯ ಕನ್ನಡಿ.
ಮಾತು ಬೇಸರ ನೀಗುವ ವಿದ್ಯೆ.
ಮೌನ ಭಾಷೆಗೂ ನಿಲುಕದ ಭಾವ.
ಕಣ್ಣೀರು ಅಸ್ತ್ರ.
ನೋವು ಅಸಹಾಯಕತೆ.
ನಗು ಔಷಧಿ.
ಹಣ ಅವಶ್ಯಕತೆ.
ಗುಣ ಆಸ್ತಿ.
ಕಲೆ ಜ್ಞಾನ.
ಧರ್ಮ ಬುನಾದಿ.
ಕರ್ಮ ಕಾಣದಾ ಕೈ ಆಟ.
ಕಾಯಕ ದೇಹ, ಮನಸಿಗೆ ಮಿತ್ರ.
ಸಂಸ್ಕೃತಿ ನೆಲೆ.
ಸಾಧನೆಜೀವಕ್ಕೆ ಜೀವನಕ್ಕೆ ಬೆಲೆ.

 ಯಲ್ಲಪ್ಪ ನಂದಿ.

ಪಾತರಗಿತ್ತಿ ಸಂತೋಷ

                        
"ಒಂದು ಪಾತರಗಿತ್ತಿ 14 ದಿನಗಳ ಕಾಲ ಮಾತ್ರ ಬದುಕುಳಿಯುವದು. 
ಆದರೆ ಅದು ಪ್ರತಿದಿನ ಅತ್ಯಂತ ಸಂತೋಷದಿಂದ ಹಾರಾಡುವದು 
ಮತ್ತು ಹಲವರ ಹೃದಯಗಳನ್ನ ಗೆಲ್ಲುವುದು ಪ್ರತಿ ಕ್ಷಣವೂ ಅತ್ಯಂತ
ಪ್ರಮುಖ ಯಾವಾಗಲೂ ಸುಖ ಸಂತೋಷದಿಂದಿರಿ"

                             ಯಲ್ಲಪ್ಪ ನಂದಿ.

ಬದುಕು

                

"ನೀವೇನನ್ನು ಬಯಸುತ್ತೀರೋ ಅದನ್ನು ಪಡೆಯಲಾರಿರಿ,
ಏನನ್ನು ಪಡೆದಿದ್ದೀರೋ ಅದನ್ನು ಅನುಭವಿಸಲಾರಿರಿ,
ಏನನ್ನು ಅನುಭವಿಸುತ್ತಿದ್ದೀರೋ ಅದು ಶಾಶ್ವತವಲ್ಲ,
ಯಾವುದು ಶಾಶ್ವತವೋ ಅದು ಬೇಸರ ಅದೇ ಬದುಕು"

                 ಯಲ್ಲಪ್ಪ ನಂದಿ.


ಗುಣ ಮಹಿಮೆ


"ಕೋಪದಿಂದ ಮಾತನಾಡಿದರೆ ಗುಣವನ್ನು ಕಳೆದುಕೊಳ್ಳುವೆ,
ಹೆಚ್ಚಾಗಿ ಮಾತನಾಡಿದರೆ "ಶಾಂತಿ"ಯನ್ನು ಕಳೆದುಕೊಳ್ಳುವೆ,
ಅನಗತ್ಯವಾಗಿ ಮಾತನಾಡಿದರೆ ಕೆಲಸವನ್ನು ಕಳೆದುಕೊಳ್ಳುವೆ,
ಅಹಂಕಾರದಿಂದ ಮಾತನಾಡಿದರೆ ಪ್ರೀತಿಯನ್ನು ಕಳೆದುಕೊಳ್ಳುವೆ,
ಸುಳ್ಳು ಸುಳ್ಳು ಮಾತನಾಡಿದರೆ ಹೆಸರು ಕಳೆದುಕೊಳ್ಳುವೆ,
ವೇಗವಾಗಿ ಮಾತನಾಡಿದರೆ ಅರ್ಥವನ್ನು ಕಳೆದುಕೊಳ್ಳುವೆ,
ಪ್ರೀತಿಯಿಂದ ಮಾತನಾಡಿದರೆ ಎಲ್ಲವನ್ನು ಗಳಿಸಿಕೊಳ್ಳುವೆ"

                 ಯಲ್ಲಪ್ಪ ನಂದಿ.