Tuesday, 22 August 2017

ಭಾರತದ ಸ್ವಾತಂತ್ರ್ಯ ದಿನಾಚರಣೆ ಆಗಸ್ಟ್ ೧೫


ಭಾರತ ದೇಶ ೧೯೪೭ ಆಗಸ್ಟ್ ೧೫ ರಂದು ಬ್ರಿಟೀಷರಿಂದ ಸ್ವತಂತ್ರವಾಯಿತು.
ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ದೇಶದಾದ್ಯಂತ ರಾಷ್ಟ್ರೀಯ ರಜಾದಿನವನ್ನಾಗಿ ಆಚರಿಸಲಾಗುತ್ತದೆ. ದೇಶದ ಹಲವೆಡೆ ತ್ರಿವರ್ಣ ಧ್ವಜವನ್ನು ಹಾರಿಸಿ ಸಿಹಿ ಹಂಚಲಾಗುತ್ತದೆ. ಈ ಆಚರಣೆಯ ಪ್ರಮುಖ ಸಮಾರಂಭ ದೆಹಲಿಯ ಕೆಂಪು-ಕೋಟೆಯಲ್ಲಿ ನಡೆಯತ್ತದೆ. ಈ ಸಮಾರಂಭದಲ್ಲಿ, ಭಾರತದ ಪ್ರಧಾನ ಮಂತ್ರಿಗಳು ರಾಷ್ಟ್ರೀಯ ಧ್ವಜವನ್ನು ಹಾರಿಸಿ,ಭಾರತದ ಭಾರತದ ರಾಷ್ಟ್ರಗೀತೆ "ಜನ ಗಣ ಮನ"ವನ್ನು ಹಾಡಿ ನಂತರ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ಈ ಭಾಷಣದಲ್ಲಿ ದೇಶದ ಸಾಧನೆ,ದೇಶದ ಮುಂದಿರುವ ಪ್ರಮುಖ ಸವಾಲುಗಳ ಬಗ್ಗೆ ಮಾತನಾಡಿ, ಕೆಲವು ಪ್ರಗತಿ ಯೋಜನೆಗಳನ್ನು ಪ್ರಕಟಿಸಲಾಗುತ್ತದೆ. ಈ ದಿನದಂದು ದೇಶದ ಸ್ವಾತ್ರಂತ್ರ್ಯಕ್ಕೆ ಮಣಿದ ನಾಯಕರನ್ನು ಸ್ಮರಿಸಲಾಗುತ್ತದೆ.
ಸ್ವಾತ್ರಂತ್ರ್ಯದ ಹಾದಿ
ಜೂನ್ ೩,೧೯೪೭ ರಂದು ಅಂದಿನ ಗವರ್ನರ್ ಜನರಲ್ ಆಗಿದ್ದ ಲಾರ್ಡ್ ಮೌಂಟ್ಬ್ಯಾಟನ್, ಬ್ರಿಟಿಶ್ ಭಾರತ ಸಾಮ್ರಾಜ್ಯವನ್ನು ಭಾರತ ಮತ್ತು ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳಾಗಿ ವಿಭಜಿಸುವುದಾಗಿ ಘೋಷಿಸಿದನು. ಇದರ ನಂತರ ಭಾರತದ ಸ್ವಾತ್ರಂತ್ರ್ಯ ಕಾಯಿದೆ ೧೯೪೭ರನ್ವಯ ಆಗಸ್ಟ್ ೧೫, ೧೯೪೭ ರಂದು ಭಾರತವನ್ನು ಸ್ವತಂತ್ರ ರಾಷ್ಟ್ರವನ್ನಾಗಿ ಘೋಷಿಸಲಾಯಿತು. ಅಂದಿನ ಮದ್ಯರಾತ್ರಿ, ಜವಾಹರ್ ಲಾಲ್ ನೆಹರು ರವರು ದೇಶದ ಪ್ರಥಮ ಪ್ರಧಾನ ಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅಂದು ಅವರು ರಾಷ್ತ್ರವನ್ನುದ್ದೇಶಿಸಿ,ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣ ಮಾಡಿದರು.
ಮಧ್ಯರಾತ್ರಿಯ ಗಂಟೆ ಹೊಡೆಯುತ್ತಿದ್ದಂತೆ ಜಗತ್ತು ಮಲಗಿರುವಾಗ ಭಾರತವು ಚಲನಶೀಲತೆ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚರಗೊಳ್ಳುತ್ತದೆ. ಇತಿಹಾಸದಲ್ಲಿ ಅಪರೂಪವಾಗಿ ಬರುವ ಇಂಥ ಈ ಗಳಿಗೆಯಲ್ಲಿ ಹಳತಿನಿಂದ ಹೊಸತಿಗೆ ಕಾಲಿಡುತ್ತಿದ್ದೇವೆ . ಹಳೆಯ ಯುಗ ಮುಗಿದು ಬಹುಕಾಲ ಅದುಮಿಟ್ಟ ದೇಶವೊಂದರ ಚೇತನವು ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಿದೆ..... ಇವತ್ತು ನಾವು ನಮ್ಮ ದುರಾದೃಷ್ಟದ ಕಾಲವನ್ನು ಮುಗಿಸುತ್ತಿದ್ದೇವೆ ಮತ್ತು ಭಾರತವು ತನ್ನನ್ನು ತಾನು ಮತ್ತೆ ಕಂಡುಕೊಳ್ಳುತ್ತಿದೆ .
ಪ್ರಧಾನಮಂತ್ರಿ ನೆಹರು ಮತ್ತು ಉಪಪ್ರಧಾನಮಂತ್ರಿ ಸರ್ದಾರ್ ವಲ್ಲಭಭಾಯ್ ಪಟೇಲ್ ರು ಲಾರ್ಡ್ ಮೌಂಟ್ ಬ್ಯಾಟನ್ನರನ್ನು ಭಾರತದ ಗವರ್ನರ್ ಜನರಲ್ ಆಗಿ ಮುಂದುವರೆಯಲು ಕೋರಿದರು. ಜೂನ್ ೧೯೪೮ ರಲ್ಲಿ ಅವರ ಸ್ಥಾನಕ್ಕೆ ಚಕ್ರವರ್ತಿ ರಾಜಗೋಪಾಲಾಚಾರಿ ಅವರು ಬಂದರು. ಪಟೇಲರು ೫೬೫ ರಾಜಸಂಸ್ಥಾನಗಳ ಭಾರತದ ರಾಜಕೀಯ ಏಕೀಕರಣ ದ ಜವಾಬ್ದಾರಿಯನ್ನು ವಹಿಸಿಕೊಂಡರು, ಜುನಾಗಢ, ಜಮ್ಮು ಮತ್ತು ಕಾಶ್ಮೀರ, ಮತ್ತು ಹೈದರಾಬಾದ್ ಸಂಸ್ಥಾನ ಗಳನ್ನು ಭಾರತಕ್ಕೆ ಸೇರ್ಪಡೆ ಮಾಡುವಲ್ಲಿ ಸೈನಿಕ ಬಲವನ್ನು ಉಪಯೋಗಿಸಿ "ರೇಷ್ಮೆ ಕೈಗವಸಿನಲ್ಲಿ ಉಕ್ಕಿನ ಮುಷ್ಠಿ" ತಂತ್ರವನ್ನು ಉಪಯೋಗಿಸಿದರು.
ಸಂವಿಧಾನ ರಚನಾಸಭೆಯು ಸಂವಿಧಾನದ ಕರಡನ್ನು 26 ನವೆಂಬರ್ 1949; ರಂದು ಸಿದ್ಧಗೊಳಿಸುವ ಕಾರ್ಯವನ್ನು ಸಂಪೂರ್ಣಗೊಳಿಸಿತು . 26 ಜನವರಿ 1950 ರಂದು ಭಾರತೀಯ ಗಣರಾಜ್ಯ ವನ್ನು ಅಧಿಕೃತವಾಗಿ ಘೋಷಿಸಲಾಯಿತು. ಸಂವಿಧಾನ ರಚನಾಸಭೆಯು ಡಾ. ರಾಜೇಂದ್ರಪ್ರಸಾದರನ್ನು ದೇಶದ ಪ್ರಥಮ ರಾಷ್ಟ್ರಪತಿಯನ್ನಾಗಿ ಚುನಾಯಿಸಿತು . ಅವರು ಗವರ್ನರ್ ಜನರಲ್ ರಾಜಗೋಪಾಲಾಚಾರಿಯವರಿಂದ ಅಧಿಕಾರವನ್ನು ಸ್ವೀಕರಿಸಿದರು .ನಂತರ ಸ್ವತಂತ್ರ ಸಾರ್ವಭೌಮ ಭಾರತವು ಇನ್ನೆರಡು ಪ್ರದೇಶಗಳನ್ನು ತನ್ನಲ್ಲಿ ಸೇರಿಸಿಕೊಂಡಿತು . ಅವು 1961ರಲ್ಲಿ ಪೋರ್ತುಗೀಸ್ ನಿಯಂತ್ರಣದಿಂದ ವಿಮೋಚನೆಗೊಳಿಸಿದ ಗೋವಾ ಮತ್ತು ಫ್ರೆಂಚರು ೧೯೫೪ರಲ್ಲಿ ಒಪ್ಪಿಸಿದ ಪಾಂಡಿಚೇರಿ . ೧೯೫೨ ರಲ್ಲಿ ಭಾರತವು ತನ್ನ ಮೊದಲ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿತು . ಶೇ. ೬೨ ಕ್ಕೂ ಹೆಚ್ಚು ಮತದಾರರು ಅದರಲ್ಲಿ ಭಾಗವಹಿಸಿದರು. ಅದರಿಂದಾಗಿ ಭಾರತವು ವಾಸ್ತವದಲ್ಲಿ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವವಾಯಿತು.
ಯಲ್ಲಪ್ಪ ನಂದಿ