Monday, 14 June 2021

ಕಾಳಜಿ

ತಿಂಗಳಿನ ಎದೆ ಮೇಲೆ
ಕಾಲಿಟ್ಟು ಬಂದವರೆ
ಮಂಗಳನ ಅಂಗಳದಿ
ಜೀವನವ ಕಂಡವರೆ!



ನೂರೊಂದು ಮಹಡಿಗಳ
ಕಟ್ಟಡವ ಕಟ್ಟುವರೆ
ಹಾರಿ ಸಾಗರದಾಚೆ
ಊರುಗಳ ಸೇರುವರೆ!



ಹೊರಗೊಂದು ನೆಲೆಯನ್ನು
ಹುಡುಕುವಾ ಮುನ್ನ
ನೆಲೆ ಕೊಟ್ಟವಳ ಬಗೆಗೆ
ಕಾಳಜಿಯು ಚೆನ್ನ!



ನಮಗೊಂದೆ ದೇಗುಲವು
ಭೂಮಿತಾಯಿ
ಅವಳ ಪೊರೆವುದೆ ನಮ್ಮ
ಪರಮ ಧ್ಯೇಯ



ಕಂಕಣವ ತೊಟ್ಟು
ಹಬ್ಬಿಸಬೇಕು ಹಸಿರು
ಇಂಗಿ ಹೋಗುವ ಮುನ್ನ
ಇಳೆಯ ಉಸಿರು


ಯಲ್ಲಪ್ಪ ನಂದಿ.