ವಿದುರ ಹಸ್ತಿನಾಪುರದ ರಾಣಿಯರಾದ ಅಂಬಿಕ ಮತ್ತು ಅಂಬಾಲಿಕೆಯರ ದಾಸಿಯ ಪುತ್ರ. ಕೆಲವರ ಪ್ರಕಾರ ಮಾಂಡವ್ಯ ಮುನಿಯಿಂದ ಶಾಪಗ್ರಸ್ತನಾದ ಯಮನ ಅವತಾರ.
ಜನ್ಮ ವೃತ್ತಾಂತ
ಈ ರಾಣಿಯರು ಹಸ್ತಿನಾಪುರದ ರಾಜ ವಿಚಿತ್ರವೀರ್ಯನ ಪತ್ನಿಯರು. ರಾಜನು ಪುತ್ರ ವಿಹೀನನಾಗಿ ಮರಣಿಸಿದಾಗ ತಾಯಿ ಸತ್ಯವತಿ ತನ್ನ ಪುತ್ರನಾದ ವ್ಯಾಸನನ್ನು ಸಹಾಯಕ್ಕಾಗಿ ಕರೆದಳು. ಆಶ್ರಮದಲ್ಲಿ ಮುನಿ ಜೀವನ ನಡೆಸುತ್ತಿದ್ದ ವ್ಯಾಸ ಮಹರ್ಷಿಯನ್ನು ನೋಡಿದ ಅಂಬಿಕೆ ಕಣ್ಣು ಮುಚ್ಚಿಕೊಂಡಳು (ಧೃತರಾಷ್ಟ್ರನ ಜನನ) ಹಾಗೂ ಅಂಬಾಲಿಕೆಯ ಬಣ್ಣ ಇಳಿದುಹೋಯಿತು (ಪಾಂಡುವಿನ ಜನನ). ರಾಣಿಯರನ್ನು ಮತ್ತೊಂದು ಸಲ ಕರೆದಾಗ ಅವರು ಹೋಗಲು ಒಪ್ಪದೇ ತಮ್ಮ ದಾಸಿಯನ್ನು ಕಳಿಸಿದರು. ಈ ದಾಸಿಯು ಮಾನಸಿಕ ಸ್ಥೈರ್ಯವನ್ನು ಹೊಂದಿದ ಕಾರಣ ಧೃತಿಗೆಡದೆ ಮುನಿಯ ಬಳಿಗೆ ಹೋದಳು. ಈ ಕಾರಣದಿಂದ ಅವಳ ಪುತ್ರನು ತನ್ನ ಮಲ ಸಹೋದರರಂತೆ ಯಾವುದೇ ಊನಗಳಿಲ್ಲದೇ ಹುಟ್ಟಿದನು. ಇವನೇ ವಿದುರ.
ಪಾತ್ರ
ವಿದುರನು ರಾಜಮನೆತನದವನಲ್ಲವಾದ ಕಾರಣ ಸಿಂಹಾಸನದ ಹಕ್ಕುದಾರನಾಗಿ ಪರಿಗಣಿತನಾಗಲಿಲ್ಲ. ತನ್ನ ಮಲ ಸಹೋದರರಿಗೆ ಪ್ರಧಾನ ಮಂತ್ರಿಯಾಗಿ ಸಹಾಯ ಮಾಡುತ್ತಿದ್ದನು. ಕೃಷ್ಣನ ನಂತರ ಪಾಂಡವರ ವಿಶ್ವಸನೀಯ ಸಲಹೆಗಾರನಾಗಿದ್ದನು. ಕೌರವರ ಕುಯುಕ್ತಿಗಳ ವಿರುದ್ಧ ಪಾಂಡವರನ್ನು ಎಚ್ಚರಿಸುತ್ತಿದ್ದನು. ಯಾರೂ ಸಹಿಸಲಾರದಂತಹ ಕಷ್ಟಕರವಾದ ಸತ್ಯವನ್ನು ಹೇಳುವುದರಲ್ಲಿ ನಿಪುಣನಾಗಿದ್ದನು ಮತ್ತು ಎಲ್ಲ ಕ್ಷೇತ್ರಗಳಲ್ಲಿ ಅತಿ ಬುದ್ಧಿವಂತನಾಗಿದ್ದನು.
ಅಂತ್ಯ
ಕುರುಕ್ಷೇತ್ರ ಯುದ್ಧದ ನಂತರ ಯುಧಿಷ್ಠಿರನನ್ನು ರಾಜನನ್ನಾಗಿ ನೇಮಿಸಿದನು. ಸಹೋದರ ಧೃತರಾಷ್ಟ್ರ ಮತ್ತು ಅತ್ತಿಗೆಯಂದಿರಾದ ಗಾಂಧಾರಿ ಮತ್ತು ಕುಂತಿಯರೊಡಗೂಡಿ ವಾನಪ್ರಸ್ಥಕ್ಕೆ ತೆರಳಿದನು. ಗಂಗಾ ನದಿಯ ದಡದಲ್ಲಿ ಕೊನೆಯುಸಿರೆಳೆದನು.