Tuesday, 29 September 2020

ವಿಚಿತ್ರವೀರ್ಯ

ವಿಚಿತ್ರವೀರ್ಯ ಮಹಾಭಾರತದಲ್ಲಿ ಶಂತನು ಮತ್ತು ಸತ್ಯವತಿಯ ಮಗ.ಇವನ ಅಣ್ಣ ಚಿತ್ರಾಂಗದ ಶಂತನುವಿನ ನಂತರ ಹಸ್ತಿನಾಪುರದ ಪಟ್ಟವೇರಿದ.ಚಿತ್ರಾಂಗದ ಸಂತಾನವಿಲ್ಲದೆ ನಿಧನ ಹೊಂದಿದುದರಿಂದ ಅವನ ತಮ್ಮನಾದ ವಿಚಿತ್ರವೀರ್ಯ ಸಿಂಹಾಸನವನ್ನೇರಿದ.ಇವನು ಪಟ್ಟವೇರಿದ ಸಮಯದಲ್ಲಿ ಇನ್ನೂ ಬಾಲಕನಾಗಿದ್ದುದರಿಂದ ಸತ್ಯವತಿಯ ಇನ್ನೊಬ್ಬ ಮಗನಾದ ಭೀಷ್ಮನು ಇವನ ಪರವಾಗಿ ರಾಜ್ಯಭಾರ ನಿಭಾಯಿಸಿದ.ಇವನು ಪ್ರಾಯ ಪ್ರಬುದ್ಧನಾದ ಸಮಯದಲ್ಲಿ ಇವನಿಗಾಗಿ ಭೀಷ್ಮನು ಕನ್ಯೆಯನ್ನು ಅರಸುತ್ತಿರುವಾಗ ಕಾಶಿಯ ರಾಜ ಸ್ವಯಂವರವನ್ನು ಏರ್ಪಡಿಸಿದ ವಿಷಯ ತಿಳಿದು ಅಲ್ಲಿಗೆ ಧಾವಿಸಿದ.ಅಲ್ಲಿ ಸ್ವಯಂವರವನ್ನು ವಿಚಿತ್ರವೀರ್ಯನ ಪರವಾಗಿ ಗೆದ್ದು ಕಾಶಿ ರಾಜನ ಮೂವರು ಕುವರಿಯರಾದ ಅಂಬಾ,ಅಂಬಿಕ ಮತ್ತು ಅಂಬಾಲಿಕರನ್ನು ಕರೆತರಲು ಪ್ರಯತ್ನಿಸಿದ. ಆದರೆ ಅಂಬಾ ಮೊದಲೇ ಸಾಳ್ವನನ್ನು ಪ್ರೀತಿಸುತ್ತಿದ್ದುದರಿಂದ ಅಂಬಿಕ ಮತ್ತು ಅಂಬಾಲಿಕೆಯರನ್ನು ಒತ್ತಾಯ ಪೂರ್ವಕ ವಿಚಿತ್ರವೀರ್ಯನಿಗೆ ಮದುವೆ ಮಾಡಿಸಿದ. ಮುಂದೆ ವಿಚಿತ್ರವೀರ್ಯನಿಗೆ ಮಕ್ಕಳಾಗುವ ಮೊದಲೇ ಕ್ಷಯ ರೋಗದಿಂದ ತೀರಿಕೊಂಡುದುದರಿಂದ ತಾಯಿ ಸತ್ಯವತಿ ಭೀಷ್ಮನಿಗೆ ಅಂಬಿಕ ಮತ್ತು ಅಂಬಾಲಿಕೆಯರನ್ನು ಮದುವೆಯಾಗುವಂತೆ ತಿಳಿಸುತ್ತಾಳೆ. ಆದರೆ ಭೀಷ್ಮನು ಮೊದಲೇ ಆಜನ್ಮ ಬ್ರಹ್ಮಚಾರಿಯಾಗಿರುವುದಾಗಿ ಶಪಥ ಮಾಡಿದ್ದುದರಿಂದ ಸತ್ಯವತಿಯ ಇನ್ನೊಬ್ಬ ಮಗನಾದ ವ್ಯಾಸನನ್ನು ಕರೆದು ಅಂಬಿಕೆ ಮತ್ತು ಅಂಬಾಲಿಕೆಯರಿಗೆ ಮಕ್ಕಳನ್ನು ಕರುಣಿಸುವಂತೆ ಹೇಳಲು ಹೇಳುತ್ತಾನೆ. ಅದರಂತೆ ವ್ಯಾಸನ ಮೂಲಕ ಸತ್ಯವತಿಯು ಅಂಬಿಕೆ ಮಾತು ಅಂಬಾಲಿಕೆಯರಿಗೆ ಮಕ್ಕಳಾಗುವಂತೆ ಮಾಡುತ್ತಾಳೆ. ಇವರೇ ಅಂಬಿಕೆಯ ಮಗ ಧೃತರಾಷ್ಟ್ರ ಮತ್ತು ಅಂಬಾಲಿಕೆಯ ಮಗ ಪಾಂಡುವಾಗಿ ಮಹಾಭಾರತ ಕಥೆಯಲ್ಲಿ ಪ್ರಸಿದ್ಧರಾದವರು.



ಶಿಖಂಡಿ

ಶಿಖಂಡಿ ಎಂಬುದು ಮಹಾಭಾರತದಲ್ಲಿ ಬರುವ ಒಂದು ವಿಶಿಷ್ಟ ಪಾತ್ರಪಾಂಚಾಲ ದೇಶದ ರಾಜನಾದ ದ್ರುಪದನ  ಮಗಳು. ಆಕೆಯ ಅಣ್ಣ ದೃಷ್ಟದ್ಯುಮ್ನ. ಮೂಲತಃ ಹೆಣ್ಣಾಗಿ ಹುಟ್ಟಿದ್ದರೂ ತನ್ನ ಗುಣ, ಶೌರ್ಯ, ವರ್ತನೆಗಳಿಂದ ಗಂಡಸೆಂದು ಬಿಂಬಿಸಲ್ಪಟ್ಟ ಪಾತ್ರವಿದು.

 

ಹಿನ್ನೆಲೆ

·         ಭೀಷ್ಮ ತನ್ನ ತಮ್ಮನಾದ ವಿಚಿತ್ರವೀರ್ಯನ ಮದುವೆಗೆಂದು ಅಂಬೆಅಂಬಿಕಾಅಂಬಾಲಿಕ ಎಂಬ ಮೂವರು ರಾಜಕುಮಾರಿಯನ್ನು ಅಪಹರಿಸುತ್ತಾನೆ. ಅವರಲ್ಲಿ ಅಂಬೆ (ಅಂಬಾ) ತಾನು ಮತ್ತೊಬ್ಬ ವ್ಯಕ್ತಿಯನ್ನು ಈಗಾಗಲೇ ಪ್ರೀತಿಸಿರುವದಾಗಿಯೂ, ತನ್ನನ್ನು ಬಿಟ್ಟು ಬಿಡಬೇಕೆಂದೂ ಭೀಷ್ಮನಲ್ಲಿ ವಿನಂತಿಸಿಕೊಳ್ಳುತ್ತಾಳೆ. ಮನ ಕರಗಿದ ಭೀಷ್ಮ ಅಂಬೆಯನ್ನು ಆಕೆಯ ಪ್ರಿಯಕರನಿಗೋಸ್ಕರ ಕಳಿಸಿಕೊಡುತ್ತಾನೆ.

·         ಆದರೆ ಪ್ರಿಯಕರ ಅಂಬೆಯನ್ನು ತಿರಸ್ಕರಿಸುತ್ತಾನೆ. ಈಗ ಅಂಬೆಯದು ವಿಚಿತ್ರ ಪರಿಸ್ಥಿತಿ. ಇತ್ತ ಪ್ರಿಯಕರನಿಂದಲೂ ತಿರಸ್ಕೃತಗೊಂಡು ಅತ್ತ ವಿಚಿತ್ರವೀರ್ಯನನ್ನೂ ಮದುವೆಯಾಗದೇ ಕಂಗೆಡುತ್ತಾಳೆ. ಹತಾಶೆಗೊಂಡ ಅಂಬೆ ತೀರ ಕೊನೆಗೆ ಭೀಷ್ಮನನ್ನೇ ಮದುವೆಯಾಗುವಂತೆ ಒತ್ತಾಯಿಸು ತ್ತಾಳೆ. ಭೀಷ್ಮ ಒಪ್ಪುವುದಿಲ್ಲ. ಹೀಗೆ ಎಲ್ಲ ಕಡೆಗಳಿಂದಲೂ ತಿರಸ್ಕೃತಗೊಂಡ ಅಂಬೆ ಆಗ ಕೋಪದಿಂದ ಭೀಷ್ಮನೆದುರು ಶಪಥಗೈಯುತ್ತಾಳೆ.

ಅಂಬೆಯ ಶಪಥ

ಮುಂದಿನ ಜನ್ಮದಲ್ಲಿ ನಾನೇ ನಿನ್ನ ಸಾವಿಗೆ ಕಾರಣಳಾಗುವೆ ಎಂದು ಭೀಷ್ಮನೆಡೆಗೆ ಕೋಪದಿಂದ ಗರ್ಜಿಸುತ್ತ ತನ್ನನ್ನು ತಾನು ಅಗ್ನಿಗೆ ಅರ್ಪಿಸಿಕೊಳ್ಳುತ್ತಾಳೆ. ಹಾಗೆ ಆತ್ಮಾಹುತಿ ಮಾಡಿಕೊಂಡ ಅಂಬೆ ದ್ರುಪದನ ಮಗಳಾಗಿ ಜನಿಸುತ್ತಾಳೆ.ಆಕೆಯ ಹುಟ್ಟಿನ ಸಮಯದಲ್ಲಿ ಅಶರೀರ ವಾಣಿ ಯೊಂದು ಈಕೆಯ ಹಿನ್ನೆಲೆಯನ್ನು ತಂದೆ ದ್ರುಪದನಿಗೆ ತಿಳಿಸುತ್ತದೆ.

ಭೀಷ್ಮನಿಗೆದುರಾಗಿ

·         ಕಾರಣಕ್ಕೆ ಹೆಣ್ಣು ಮಗುವನ್ನು ಗಂಡಸಿನಂತೆ ಬೆಳೆಸುವಂತೆ ಸೂಚಿಸುತ್ತದೆ. ಹಾಗಾಗಿ ಶಿಖಂಡಿ ಹೆಣ್ಣಾದರೂ ಗಂಡಸಿನಂತೆ ಬೆಳೆಯುತ್ತದೆ. ಮುಂದೆ ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಕೃಷ್ಣ ಭೀಷ್ಮನಿಗೆದುರಾಗಿ ಶಿಖಂಡಿಯನ್ನೇ ತಂದು ನಿಲ್ಲಿಸುತ್ತಾನೆ. ಭೀಷ್ಮ ಹೆಣ್ಣಿನ ಎದುರು ಯುದ್ಧ ಮಾಡಲಾರೆ ಎಂದು ಶಸ್ತ್ರ ಕೆಳಗಿಡುತ್ತಾನೆ.

·         ಆಗ ಕೃಷ್ಣ ಅರ್ಜುನನಿಗೆ ಮೋಸದಿಂದ ಭೀಷ್ಮನೊಂದಿಗೆ ಹೋರಾಡುವಂತೆ ಪ್ರೆರೇಪಿಸಿ ಭೀಷ್ಮನನ್ನು ಹೊಡೆದುರುಳಿಸುತ್ತಾನೆ. ಹೀಗೆ ಭೀಷ್ಮನ ಸಾವಿಗೆ ಕಾರಣವಾಗುವುದರ ಮೂಲಕ ಅಂಬೆಯು ಶಿಖಂಡಿಯಾಗಿ ತನ್ನ ಶಪಥ ಪೂರೈಸಿಕೊಳ್ಳುತ್ತಾಳೆ. ಶಿಖಂಡಿ ಎಂದರೆ 'ಉಭಯ ಲಿಂಗಿ'ಗಳು ಎಂದು ಹೇಳಲಾಗುತ್ತದೆ.




Monday, 9 March 2020

ಹೋಳಿ

ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಹೋಳಿಹಬ್ಬ ಅಥವಾ ಕಾಮನಹಬ್ಬವನ್ನು ಆಚರಿಸುತ್ತೇವೆ.
ಉತ್ತರ ಭಾರತದಲ್ಲಿ ಈ ಹಬ್ಬಕ್ಕೆ ಹೆಚ್ಚು ಮಹತ್ವವಿದೆ.

ಪುರಾಣ ಕಾರಣ

ಪುರಾಣದಲ್ಲಿ ಉಲ್ಲೇಖವಿರುವ ಕಾಮದಹನದಲ್ಲಿ- ತಾರಕಾಸುರನೆಂಬ ರಾಕ್ಷಸ ರಾಜ ಬ್ರಹ್ಮನ ವರಬಲದ ಸೊಕ್ಕಿನಿಂದ ಲೋಕದಲ್ಲಿ ಮೆರೆಯತೊಡಗಿದಾಗ, ಆತನ ಉಪಟಳ ತಾಳಲಾರದೆ, ಅವನ ಸಂಹಾರಕ್ಕೆ ದೇವತೆಗಳು ಉಪಾಯ ಹೂಡುತ್ತಾರೆ. ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಎಂಬ ವರಬಲವೇ ಆತನ ಮದಕ್ಕೆ ಕಾರಣ. ಆದರೆ ಆ ಸಂದರ್ಭದಲ್ಲಿ ಶಿವನು ದಕ್ಷ ಯಜ್ಞದಲ್ಲಿ ದಾಕ್ಷಾಯಿಣಿಯನ್ನು ಕಳೆದುಕೊಂಡು ಭೋಗಸಮಾಧಿಯಲ್ಲಿದ್ದ ಕಾರಣ, ಮತ್ತೊಂದೆಡೆ ಶಿವೆಯೂ ಶಿವನಿಗಾಗಿ ತಪಸ್ಸು ಮಾಡುತ್ತಿದ್ದ ಕಾರಣ, ಅವರಿಬ್ಬರೂ ಒಂದುಗೂಡುವಂತಿರಲಿಲ್ಲ. ದೇವತೆಗಳು ಕಾಮ (ಮನ್ಮಥ)ನ ಮೊರೆ ಹೋದರು. ತತ್ಫಲವಾಗಿ ತನ್ನ ನಿರ್ನಾಮದ ಅರಿವಿದ್ದೂ, ಲೋಕಕಲ್ಯಾಣವೆಂಬ ಅತಿಶಯವಾದ ಪರೋಪಕಾರಾರ್ಥವಾಗಿ ಕಾಮನು ತನ್ನ ಹೂಬಾಣಗಳಿಂದ ಶಿವನನ್ನು ಬಡಿದೆಬ್ಬಿಸಿ, ತಪೋಭಂಗ ಮಾಡುತ್ತಾನೆ. ಕೆರಳಿ ಮೂರನೇ ಚಕ್ಷುವನ್ನು ತೆರೆದ ಈಶ್ವರನ ಕ್ರೋಧಾಗ್ನಿಗೆ ಕಾಮನು ಸುಟ್ಟು ಭಸ್ಮವಾಗುತ್ತಾನೆ. ಕಾಮನರಸಿ ರತಿದೇವಿಯು ಪರಿಪರಿಯಾಗಿ ಶಿವನಲ್ಲಿ ಪತಿಭಿಕ್ಷೆ ಯಾಚಿಸಲು, ಕಾಮನು ಅನಂಗನಾಗಿಯೇ ಇರುತ್ತಾನೆ. ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ ಎಂದು ಶಿವನು ಅಭಯ ನೀಡಿದನೆಂಬುದು ಪುರಾಣ ಕಥನ.

ಮತ್ತೊಂದು ಪಾಠಾಂತರದ ಪ್ರಕಾರ- ಪೂರ್ವದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದ. ದುರಹಂಕಾರಿಯೂ ಕ್ರೂರಿಯೂ ಆದ ತಾರಕಾಸುರನು ಲೋಕಕಂಟಕನಾಗಿ ಮೆರೆಯುತ್ತಿದ್ದ. ತನಗೆ ಮರಣವು ಬಾರದಿರಲಿ, ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಅಂದು ಬ್ರಹ್ಮನಲ್ಲಿ ವರವನ್ನು ಬೇಡಿದ್ದ. ಭೋಗಸಮಾಧಿಯಲ್ಲಿದ್ದ ಶಿವ, ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾದ್ಯವಿರಲಿಲ್ಲ. ದೇವತೆಗಳು ನಿರುಪಾಯರಾಗಿ ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು. ಕಾಮ (ಮನ್ಮಥ) ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದರು. ಭೋಗಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು. ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದನು. ರತಿದೇವಿ ದು:ಖದಿಂದ ಶಿವನಲ್ಲಿ ಪತಿಭಿಕ್ಷೆಯನ್ನು ಬೇಡಿದಳು. ಶಾಂತಗೊಂಡ ಶಿವನು ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ ಕಾಮನಿಗೆ ವರ ಕೊಟ್ಟನು. ಲೋಕಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ. ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು "ಕಾಮನ ಹುಣ್ಣಿಮೆ"ಯಾಗಿ ಆಚರಿಸಲ್ಪಡುತ್ತದೆ.

                         ಯಲ್ಲಪ್ಪ ನಂದಿ

Thursday, 20 February 2020

ಶಿವರಾತ್ರಿಯ ಮಹಿಮೆ



ಕೈಲಾಸವಾಸಿ ಶಿವನಿಗೆ ಶಿವರಾತ್ರಿ ಅತ್ಯಂತ ಪ್ರಿಯವಾದ ದಿನ. ಶಿವರಾತ್ರಿಯಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತ: ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ. ಶಿವ-ಪಾರ್ವತಿಯರ ವಿವಾಹ ಮಹೋತ್ಸವದ ದಿನವಿದು ಎಂಬುದು ವಿಶೇಷ. ಹಿಮವಂತನ ಮಗಳು ಪಾರ್ವತಿ ಈ ದಿನದಂದು ರಾತ್ರಿಯಿಡಿ ಶಿವನಾಮ ಪಠಿಸುತ್ತಾ, ತಪಸ್ಸು ಮಾಡಿ, ಶಿವನನ್ನು ಮೆಚ್ಚಿಸಿ, ವಿವಾಹವಾದಳೆಂಬುದು ಪ್ರತೀತಿ. ಶಿವ ರುದ್ರತಾಂಡವನಾಡಿದ ರಾತ್ರಿಯೂ ಇಂದೇ ಎನ್ನಲಾಗುತ್ತದೆ. ದೇವತೆಗಳು ಹಾಗೂ ಅಸುರರ ನಡುವೆ ಸಮುದ್ರ ಮಂಥನ ನಡೆದು ವಿಷ ಉದ್ಭವವಾದಾಗ, ಅದನ್ನು ಶಿವ ಕುಡಿದ. ವಿಷ ಗಂಟಲೊಳಗಿಂದ ಇಳಿಯದಂತೆ ಪಾರ್ವತಿ ಇಡೀ ರಾತ್ರಿ ತಡೆದಳು ಎನ್ನುತ್ತದೆ ಶಿವಪುರಾಣದ ಇನ್ನೊಂದು ಮಹಿಮೆ. ಹಾಗಾಗಿ, ಭಕ್ತರು ಇಡೀ ರಾತ್ರಿ ಎಚ್ಚರವಿದ್ದು, ನೀಲಕಂಠನನ್ನು ಸ್ತುತಿಸುತ್ತಾರೆ. ಭಗೀರಥನ ತಪಸ್ಸಿಗೆ ಮೆಚ್ಚಿ ಇಳೆಗೆ ಇಳಿದು ಬಂದ ಗಂಗೆಯನ್ನು ಶಿವ ತನ್ನ ಜಡೆಯಲ್ಲಿ ತುಂಬಿಸಿಕೊಂಡಿದ್ದ. ಇದರಿಂದ ವಿಚಲಿತನಾದ ಭಗೀರಥ ಗಂಗೆಯನ್ನು ಭೂಮಿಗೆ ಹರಿಸುವಂತೆ ಶಿವನನ್ನು ಪ್ರಾರ್ಥಿಸಿದ. ಆತನ ಭಕ್ತಿಗೆ ಮೆಚ್ಚಿ ಶಿವ ಗಂಗೆಯನ್ನು ಹರಿಯಬಿಟ್ಟಿದ್ದು ಇದೇ ದಿನ ಎನ್ನುತ್ತದೆ ಪುರಾಣ. ಲಿಂಗಪುರಾಣದ ಪ್ರಕಾರ, ಲಿಂಗ ರೂಪಿಯಾಗಿ ಭಕ್ತರಿಗೆ ಅನುಗ್ರಹ ನೀಡಿದ ದಿನವಿದು. ಶಿವನ ಆದಿ ಮತ್ತು ಅಂತ್ಯ ಹುಡುಕಲು ಹೊರಟ ವಿಷ್ಣು ಹಾಗೂ ಬ್ರಹ್ಮನಿಗೆ, ಶಿವರಾತ್ರಿಯಂದು ಶಿವ ಲಿಂಗರೂಪಿಯಾಗಿ ದರ್ಶನ ನೀಡಿದ ಎಂಬುದು ಪ್ರತೀತಿ.

ಯುವರಾಜ ನಂದಿ









Sunday, 2 February 2020

ಜೀವನ


ಬದುಕೊಂದು ಸಾಗರವಾದರೆ ಅದರಾಚೆ ಕಾಣುವ ದಡವ ಮುಟ್ಟಬೇಕೆಂದು ಆಸೆಪಡುವ ಆಶಾವಾದಿಗಳೆ ನಾವು. ಈ ಓಟದಲ್ಲಿ ಪಡೆಯುವುದು ಏನಿಲ್ಲ, ಕಳೆದುಕೊಳ್ಳುವುದು ಏನಿಲ್ಲ. ಹಾಗಂತ ಓಟವನ್ನು ನಿಲ್ಲಿಸುವಂತೆಯೂ ಇಲ್ಲ. ಆದರೆ ದಡ ಸಮೀಪಿಸುತ್ತಿದ್ದಂತೆ ಉಳಿಯುವುದು ನೆನಪುಗಳು ಮಾತ್ರ ಅದರಲ್ಲಿ ಮನಸಿಗೆ ಹಿತ ನೀಡುವ ಸುಂದರ ಅಲೆಗಳು ಕೆಲವಾದರೆ, ಮುಳ್ಳುಗಳಂತೆ ಚುಚ್ಚಿ ಚುಚ್ಚಿ ಕೊಲ್ಲುವ ಭುಗಿಲೆದ್ದ ಸುನಾಮಿಗಳು ಹಲವು.

ಜೀವನವನ್ನು ಸಮುದ್ರಕ್ಕೆ ಹೋಲಿಸಲು ಕಾರಣ ಸಮುದ್ರ ನೋಡಲು ಎಷ್ಟು ಶಾಂತವೋ ಒಮ್ಮಿಂದೊಮ್ಮೆಲೆ ರುದ್ರತಾಂಡವನಂತೆ ನರ್ತಿಸುತ್ತದೆ, ಹಾಗೆ ಜೀವನವು ಕೂಡ ಒಮ್ಮೆ ಸುಂದರ ಶಾಂತವೆನಿಸಿದರೂ ಅನಿರೀಕ್ಷಿತ ತಿರುವುಗಳು ಬಂದು ಅಲ್ಲೋಲಕಲ್ಲೋಲ ಮಾಡಿಬಿಡುತ್ತವೆ. ಸಮುದ್ರದಿಂದ ನಾವು ಕಲಿಯುವ ಪಾಠವೆಂದರೆ ಯಾವುದು ಇಲ್ಲಿ ಶಾಶ್ವತವಲ್ಲ ಅಲೆಗಳಂತೆ ಸುಖ ದುಃಖಗಳು ಬಂದು ಹೋಗಿ ಬಂದು ಹೋಗಿ ಮಾಡುತ್ತಲೇ ಇರುತ್ತವೆ, ಆದರೆ ನಮ್ಮ ಮನಸ್ಸನ್ನು ಮಾತ್ರ ಸಂತೋಷದಿಂದ ಹಿಗ್ಗಲೂ ಬಿಡದೇ ದುಃಖದಿಂದ ಕುಗ್ಗಲೂ ಬಿಡದೇ ದಡದಲ್ಲಿರುವ ಮರಳಿನಂತೆ ಸ್ಥಿರವಾಗಿಟ್ಟುಕೊಂಡರೆ ಜೀವನದಲ್ಲಿ ಎಂತಹ ಸಂದರ್ಭವನ್ನಾದರೂ ಅನಾಯಾಸವಾಗಿ ಎದುರಿಸಿ ದಡವನ್ನು ಸೇರಬಹುದು.

ಯಲ್ಲಪ್ಪ ನಂದಿ 

Saturday, 1 February 2020

ಜೀವನವೊಂದು ಪುಸ್ತಕದಂತೆ


ಜೀವನವೊಂದು ಪುಸ್ತಕದಂತೆ
ಕೆಲವು ಅಧ್ಯಾಯ ದುಃಖದಿಂದಿದ್ದರೆ
ಕೆಲವು ಅಧ್ಯಾಯ ಸಂತಸದಿಂದಿರುತ್ತವೆ
ಸುಮಾರು ಉತ್ತೇಜಕವಾಗಿರುತ್ತವೆ
ಆದರೆ ನೀನು ಪುಟಗಳನ್ನೇ ತಿರುವದಿದ್ದರೆ
ನಿನಗೆಂದು ತಿಳಿಯದು ಮುಂದೇನಿದೆಯೆಂದು
ದುಃಖದಿಂದ ಕುಗ್ಗದೆ ಖುಷಿಯಿಂದ ಹಿಗ್ಗದೇ
ಪ್ರತೀ ಪುಟವೂ ನಿನ್ನದೇ ಎಂದು ನಡೆಸು ಜೀವನ
ಆಗ ನಿನ್ನ ಹುಟ್ಟಾಗುವುದು ಪಾವನ

ಯಲ್ಲಪ್ಪ ನಂದಿ

ಗಂಗೆ - ಗೌರಿ


ಸಂಸ್ಕೃತ ಸಾಹಿತ್ಯದಲ್ಲಿ ಹಾಗೂ ಕನ್ನಡ ಜನಪದ ಸಾಹಿತ್ಯದಲ್ಲಿ ಗಂಗೆ-ಗೌರಿಯರ ಪ್ರಸ್ತಾಪ ಎಷ್ಟು ರಮ್ಯವಾಗಿ ಬಂದಿದೆಯೆಂಬುದನ್ನು ಈ ಲೇಖನ ವಿವರಿಸುತ್ತದೆ.
ಪಾರ್ವತಿಯ ತಪೋನಿಷ್ಠೆಗೆ ಮನಸೋತ ಪರಮೇಶ್ವರ ಆಕೆಯನ್ನು ವಿವಾಹವಾದ ಬಳಿಕ ಪ್ರೀತಿಯಿಂದ ತನ್ನ ತೊಡೆಯ ಮೇಲೆ ಆಕೆಯನ್ನು ಕುಳ್ಳಿರಿಸಿಕೊಂಡು ಆಲಿಂಗಿಸಿ ಕೊಂಡನೆಂಬುದೂ ಭಗೀರಥನ ತಪಃಫಲವಾಗಿ ಗಂಗೆ ದೇವಲೋಕದಿಂದ ಭೂಮಿಗೆ ಧುಮುಕಲಾರಂಭಿಸಿದಾಗ ಆ ವೇಗವನ್ನು ತಾಳಲು ಭೂಮಿ ಅಸಮರ್ಥಳೆಂಬುದನ್ನು ಗ್ರಹಿಸಿದ ಶಿವ ದೃಢವಾಗಿ ನಿಂತು ಆಕೆಯನ್ನು ತನ್ನ ಜಟಾಕಲಾಪದೊಳಕ್ಕೆ ತಾಳಿಕೊಂಡನೆಂಬುದೂ ಪುರಾಣಪ್ರಸಿದ್ಧ ವಿಷಯ. ಗೌರಿ ಶಿವನ ಪತ್ನಿ ; ಶಿವನ ಎಡತೊಡೆ ಅವಳಿಗೆ ಆಸನ. ಗಂಗೆ ಪ್ರಾಸಂಗಿಕವಾಗಿ ಬಂದವಳು ; ಆದರೂ ಅವಳಿಗೆ ಶಿವನ ತಲೆಯ ಮೇಲೆ ಸ್ಥಾನ. ಶಿವನ ಪ್ರೇಮಕ್ಕಾಗಿ ಉಗ್ರವಾದ ತಪಸ್ಸುಮಾಡಿ ಅವನನ್ನು ವರಿಸಿ ಮದುವೆಯಾದ ಪತ್ನಿಗೆ ತನ್ನ ಸಮ್ಮುಖದಲ್ಲೇ ಈ ರೀತಿ ಅನ್ಯಸ್ತ್ರೀಯೊಬ್ಬಳು ತನ್ನ ಪತಿಯ ತಲೆಯ ಮೇಲೆ ಕುಳಿತುಕೊಳ್ಳುವಷ್ಟು ಸ್ವಾತಂತ್ರ್ಯ ಪಡೆಯುವುದು ಸಹ್ಯವಾದೀತೆ-ಎಂಬ ಸ್ತ್ರೀಸ್ವಭಾವದ ದೌರ್ಬಲ್ಯವನ್ನು ಆಧಾರವಾಗಿಟ್ಟುಕೊಂಡು ಕೆಲವು ಕವಿಗಳು ಕುಹಕವಾಗಿ, ಆಲಂಕಾರಿಕವಾಗಿ, ರಂಜನೀಯವಾಗಿ ಅನೇಕ ಶ್ಲೋಕಗಳನ್ನು ರಚಿಸಿದ್ದಾರೆ. ಒಬ್ಬ ಕವಿಯಂತೂ ಶಿವ ಸಂಸಾರದಲ್ಲಿ ಜುಗುಪ್ಸೆಗೊಂಡು ಹಾಲಾಹಲವನ್ನು ಕುಡಿಯಲು ಇತರ ಕೌಟುಂಬಿಕೆಗಳ ಕಲಹಗಳ ಜೊತೆಯಲ್ಲಿ, ಗೌರಿಗೆ ಗಂಗೆಯ ಮೇಲೆ ಉಂಟಾಗಿದ್ದ ಅಸೂಯೆಯೂ ಕಾರಣವಾಯಿತೆಂದು ಹೇಳಿರುವುದು ತುಂಬ ರಂಜಕವಾಗಿದೆ.
.....ಗೌರಿ ಜುಹ್ನುಸುತಾಮಸೂಯತಿ ; ಕಲಾನಾಥಂ ಕಪಾಲಾನಲ ಃ | ನಿರ್ವಿಣ್ಣ ಃ ಸ ಪಪೌ ಕುಟುಂಬಕಲಹಾದೀಶೋsಪಿ ಹಾಲಹಲಂ ||

ಕೊಂಕು ನುಡಿಗೆ ಪ್ರಸಿದ್ಧ ಉದಾಹರಣೆಯಾದ ವಿಶಾಖದತ್ತನ ಮುದ್ರಾರಾಕ್ಷಸ ನಾಟಕದ ನಾಂದೀ ಪದ್ಯದಲ್ಲೂ ಗೌರಿಗೆ ಗಂಗೆಯ ಮೇಲಿದ್ದ ಅಸೂಯೆ ಅಭಿವ್ಯಕ್ತವಾಗುತ್ತದೆ.
ಧನ್ಯ ಕೇಯಂ ಸ್ಥಿತಾ ತೇ ಶಿರಸಿ ? ಶಶಿಕಲಾ ; ಕಿಂ ನು ನಾಮೈತದಸ್ಯಾಃ ? ನಾಮೈವಾನ್ಯಾಸ್ತದೇತತ್ಪರಿಚಿತಮಪಿ ತೇ ವಿಸ್ಮøತಂ ಕಸ್ಯ ಹೇತೋಃ | ನಾರೀಂ ಪೃಚ್ಛಾಮಿ ನೇಂದುಂ ; ಕಥಯತು ವಿಜಯಾನ ಪ್ರಮಾಣಂ ಯದೀಂದು ಃ ದೇವ್ಯಾ ನಿಹ್ನೋತುಮಿಚ್ಛೋಃ ಇತಿ ಸುರಸರಿತಂ ಶಾಠ್ಯಮವ್ಯಾದ್ವಿಭೋರ್ವಃ ||
ಶಿವನ ತಲೆಯ ಮೇಲೆ ಸ್ಥಾನ ಪಡೆದಿರುವ ಗಂಗೆಯನ್ನು ನೋಡಿ ಗೌರಿ ತನ್ನಲ್ಲುಂಟಾದ ಅಸೂಯೆಯನ್ನು ಹೊರಗೆಡಹದೆ, ಚುಚ್ಚುನುಡಿಯಿಂದ ಶಿವನನ್ನೇ ಪ್ರಶ್ನಿಸುತ್ತಾಳೆ-ಧನ್ಯಾ ಕೇಯಂ ಸ್ಥಿತಾ ತೇ ಶಿರಸಿ?-ನಿನ್ನ ತಲೆಯ ಮೇಲೆ ಕುಳಿತಿರುವ ಧನ್ಯೆಯಾದ ಈಕೆ ಯಾರು? ಗೌರಿಯ ಅಸೂಯೆ ಅಸಹನೆಗಳನ್ನು ಮನಗಂಡ ಶಿವ, ಗಂಗೆ ತನ್ನ ಜಟಿಯಲ್ಲಿಲ್ಲವೇ ಇಲ್ಲವೋ ಎಂಬಂತೆ, ಗೌರಿ ಕೇಳಿದುದು ತನ್ನ ತಲೆಯ ಮೇಲಿರುವ ಚಂದ್ರಕಲೆಯನ್ನುದ್ದೇಶಿಸಿಯೇ ಎಂಬ ಭಾವಬರುವಂತೆ, ಉತ್ತರ ಹೇಳುತ್ತಾನೆ-ಶಶಿಕಲೆ ಎಂದು. ಗೌರಿ ಕೇಳುತ್ತಾಳೆ-ಶಶಿಕಲೆ ಎಂಬುದು ಆಕೆಯ ಹೆಸರೇನು ? ಶಿವ ಹೇಳುತ್ತಾನೆ-ಹೌದು ; ಅದು ಅವಳ ಹೆಸರೇ. ಈ ವಿಚಾರ ನಿನಗೆ ಪರಿಚಿತವಾದದ್ದೇ ಆದರೂ ಹೇಗೆ ಮರೆತುಹೋಯಿತು ? ಶಿವ ಮಾಡುತ್ತಿರುವ ಈ ಅಪಲಾಪ ಗೌರಿಗೆ ಅರ್ಥವಾಗಿ, ಅವಳು ಗಡಸು ಧ್ವನಿಯಲ್ಲಿ ಹೇಳುತ್ತಾಳೆ ನಾನು ಚಂದ್ರನನ್ನು (ಕುರಿತು) ಕೇಳುತ್ತಿಲ್ಲ ; ಹೆಂಗಸನ್ನು ಕುರಿತು ಕೇಳುತ್ತಿದ್ದೇನೆ. ಗೌರಿಯ ಈ ಮಾತಿನ ಅರ್ಥವನ್ನೂ ತಿರುವುಮುರುವು ಮಾಡಿ ಶಿವ ಹೇಳುತ್ತಾನೆ ಹಾಗಾದರೆ ಹೆಂಗಸಾದ (ನಿನ್ನ ಈ ಸಖಿ) ವಿಜಯಿಯೇ ಹೇಳಲಿ-ಇದು ಪ್ರಾಮಾಣಿಕವಾಗಿ ಚಂದ್ರನೇ ಅಲ್ಲವೇ ಎಂಬುದನ್ನು. ಈ ಪ್ರಕಾರವಾಗಿ ಗೌರೀದೇವಿಯಿಂದ ಗಂಗೆಯನ್ನು ಮರೆಯಿಸಬಯಸಿದ ಪರಶಿವನ ಶಾಠ್ಯ ನಿಮ್ಮನ್ನು ಸಲಹಲಿ-ಎಂದು ಕವಿ ಆಶಿಸುತ್ತಾನೆ.
ಇದೇ ಬಗೆಯ, ಆದರೆ ಬೇರೆ ಧಾಟಿಯ ಮತ್ತೊಂದು ಕುಹಕಪೂರ್ಣ ಶ್ಲೋಕದಲ್ಲಿ ಗಂಗೆಯ ಮೇಲೆ ಗೌರಿಗಿದ್ದ ಮಾತ್ಸರ್ಯ ಸ್ಟಷ್ಟವಾಗಿ ಮೂಡಿಬಂದಿದೆ. ಇಲ್ಲೂ ಶಿವ ತನ್ನ ತಲೆಯ ಮೇಲೆ ಗಂಗೆ ಎಂಬ ಯಾವ ಹೆಂಗಸೂ ಇಲ್ಲವೇ ಇಲ್ಲ ; ಅಲ್ಲಿರುವುದು ಬರೀ ನೀರು ಸ್ವಾರಸ್ಯವಾಗಿ ನಿರೂಪಿಸಿ ಗೌರಿಗೆ ತಿಳಿಯಹೇಳಿರುವ ರೀತಿ ಪ್ರತಿಭಾಸಂಪನ್ನವಾಗಿದೆ.
ಮೌಳೌ ಕಿಂನು ಮಹೇಶ ? ಮಾನಿನಿ, ಜಲಂ; ಕಿಂ ವಕ್ತ್ರಂ? ಅಂಭೋರುಹಂ;
ಕಿಂ, ನೀಲಾಲಕವೇಣಿಕಾ ? ಮಧುಕರಾಃ ಕಿಂ ಭ್ರೂಲತೇ ? ವೀಚಿಕಾಃ ; ಕಿಂ ನೇತ್ರೇ ? ಶಫರೀದ್ವಯಂ ; ಕಿಮು ಕುಚೌ ? ಪ್ರೇಂಖದ್ರಥಾಂಗದ್ವಯಂ
ಸಾಶಂಕಾಂ ಇತಿ ವಂಚಯನ್ ಗಿರಿಸುತಾಂ ಗಂಗಾಧರಃ ಪಾತು ವಃ ||
ಇಲ್ಲಿ ಗೌರಿ ಗಂಗೆಯ ಹೆಸರೆತ್ತದೆಯೇ ಅವಳ ಒಂದೊಂದು ಅವಯವವನ್ನೂ ನಿರ್ದೇಶಿಸಿ ಶಿವನನ್ನು ಪ್ರಶ್ನಿಸುವ ಧಾಟಿ ಗಂಭೀರವಾಗಿದೆ. ಅವಳು ಮೊದಲು ಕೇಳುತ್ತಾಳೆ-ಇದೇನು ನಿನ್ನ ತಲೆಯ ಮೇಲೆ, ಮಹೇಶ ? ಶಿವ ಹೇಳುತ್ತಾನೆ ನಿರ್ಲಿಪ್ತನಾಗಿ-ನೀರು, ಮಾನಿನಿ. ಇಲ್ಲಿ ಶಿವನಲ್ಲಿ ಏನನ್ನೂ ಮರೆಮಾಚುವ ಪ್ರಸಕ್ತಿಯೇ ಇಲ್ಲ. ಅವನಿಗೆ ಗಂಗೇ ಬರೀ ನೀರು ಅಥವಾ ನದಿ. ಗೌರಿ ದೃಷ್ಟಿಯಲ್ಲಿ ಗಂಗೆ ಒಬ್ಬ ರೂಪವತಿಯಾದ ಹೆಂಗಸು. ಆದ್ದರಿಂದಲೇ ಅವಳಿಗೆ ಅಸಹನೆ, ಅಸೂಯೆ. ಶಿವನ ಸಲೀಸಾದ ಉತ್ತರ ಕೇಳಿ ಅವಳು ಪುನಃ ಪ್ರಶ್ನಿಸುತ್ತಾಳೆ-(ಈ) ಮುಖವೋ ? ಅದು ಕಮಲ. ಈ ನೀಲಕೇಶಗಳ ಜಡೆಯೋ? ಅವು ದುಂಬಿಗಳ ಸಾಲು. ಈ ಎರಡು ಹುಬ್ಬುಗಳು ? ಅವು ಅಲೆಗಳು. ಆ ಎರಡು ಕಣ್ಣುಗಳೊ ? ಅವು ಎರಡು ಮೀನುಗಳು ಜೋಡಿ. ಆ ಎರಡು ಸ್ತನಗಳು ? ಅವು ತೂಗಾಡುತ್ತಿರುವ ಚಕ್ರವಾಹಕಗಳು! ಆಶಂಕಗೊಂಡ ಗೌರಿಯನ್ನು ಈ ರೀತಿ ವಂಚಿಸುತ್ತಿರುವ ಗಂಗಾಧರ ನಿಮ್ಮನ್ನು ಸಲಹಲಿ.
ಇದೇ ಬಗೆಯ ಮತ್ತೂ ಒಂದು ಶ್ಲೋಕದ ವಸ್ತುವೂ ಗೌರಿಯ ಅಸೂಯೆಯೇ ಆಗಿದೆ. ಏಷಾ ತೇ ಹರ! ಕಾ ಸಗಾತ್ರಿ ? ಕತಮಾ ? ಮೂಧ್ರ್ನಿ ಸ್ಥಿತಾ; ಕಿಂ ಜಟಾ ? ಹಂಸಃ ಕಿಂ ಭಜತೇ ಜಟಾಂ? ನಹಿ, ಶಶೀ; ಚಂದ್ರೋಜಲಂ ಸೇವತೇ ? ಮುಗ್ಧೇ! ಭೂತಿರಿಯಂ; ಕುತ್ರೋತ್ರ ಸಲಿಲಂ ? ಭೂತಿಸ್ತರಂಗಾಯತೇ ಏವಂ ಯೋ ವಿನಿಗೂಯತೇ ತ್ರಿಪಥಗಾಂ ಪಾಯತ್ಸವಃ ಶಂಕರ ||
ಮೇಲಿನ ಶ್ಲೋಕಗಳು ಸಂವಾದರೂಪದಲ್ಲಿದ್ದರೆ ಮುಂದಿನ ಶ್ಲೋಕದಲ್ಲಿ ಗಂಗೆಯನ್ನು ತನ್ನ ತಲೆಯಮೇಲಿರಿಸಿಕೊಂಡಿರುವ ಶಿವನನ್ನು ಗೌರಿ ನೇರವಾಗಿಯೇ ಕೋಪದಿಂದ ತರಾಟೆಗೆ ತೆಗೆದುಕೊಳ್ಳುವುದನ್ನು ಕಾಣಬಹುದು.
ಸಂಪ್ರಾಪ್ತಂ ಮಕರಧ್ವಜೇನ ಮಥನಂ ತ್ವತ್ತೋಮದರ್ಥೇ ಪುರಾ ತದ್ಯುಕ್ತಂ ಬಹುಮಾರ್ಗಗಾಂ ಮಮ ಪುರೋ ನಿರ್ಲಜ್ಜ ವೋಢುಸ್ತವ ? ತಾಮೇನಾಮನುಯಸ್ವ ಭಾವಕುಟಿಲಾಂ ; ಹೇ ಕೃಷ್ಣಕಂಠ ! ಗ್ರಹಂ ಮುಂಚೇತ್ಯಾಹ ರುಷಾ ಯಮದ್ರಿತನಯಾ (ಲಕ್ಷ್ಮೀಶ್ಚ) ಪಾಯತ್ಸ ವಃ ||
ಹಿಂದೆ ನನಗಾಗಿ ಮನ್ಮಥನೂ ನಿನ್ನ ದೆಸಿಯಿಂದ ಕಷ್ಟಕ್ಕೀಡಾದ. ಹಾಗಿರುವಾಗ ಎಲೌ ಲಜ್ಜೆಯಿಲ್ಲದವನೆ ! ನನ್ನ ಮುಂದೆಯೇ ಗಂಗೆಯನ್ನು ತಲೆಯ ಮೇಲೆ ಹೊತ್ತುಕೊಂಡಿರುವೆಯಲ್ಲ, ಇದು ನಿನಗೆ ತರವೇ ? ಕುಟಿಲ ಪ್ರೇಮದ ಅವಳ ಅನುನಯವನ್ನೇ ಮಾಡು ಓ ನೀಲಕಂಠ ! ಬಿಡು ನನ್ನ ಆಲಿಂಗವನ್ನು-ಎಂಬುದಾಗಿ ಗೌರಿ ಕೋಪದಿಂದ ಯಾವನನ್ನುದ್ದೇಶಿಸಿ ನುಡಿದಳೋ ಆ ಶಿವ ನಿಮ್ಮನ್ನು ಸಲಹಲಿ.
ಈ ಎಲ್ಲ ಶ್ಲೋಕಗಳೂ ಆಶೀರ್ವಚನರೂಪವಾದ ಮಂಗಳಶ್ಲೋಕಗಳೆಂಬುದನ್ನು ಗಮನಿಸಬೇಕು. ಗೌರಿಯ ಅಸಹನೆ ಅಸೂಯೆಗಳು ಕವಿಗಳಿಂದ ಆರೋಪಿತವಾದುವೇ ವಿನಾ ವಾಸ್ತುವಿಕವಲ್ಲ. ಗಂಗೆ-ಗೌರಿ ಇಬ್ಬರೂ ಸತ್ತ್ವಪ್ರಧಾನರು; ದೈವೀಸಂಪತ್ತಿಯಿಂದ ಕೂಡಿದ ಮಹಾನುಭಾವೆಯರು, ಜಗದ್ವಂದ್ಯೆಯರು. (ಎಸ್.ಆರ್.ಎಎನ್.)
ಗಂಗೆಗೌರಿಯರ ಚಿತ್ರಗಳು ಕಾವ್ಯಪುರಾಣಗಳಲ್ಲಿಗಿಂತ ಹೆಚ್ಚು ಯಶಸ್ವಿಯಾಗಿ ಜನಪದ ಸಾಹಿತ್ಯದಲ್ಲಿ ಕಾಣಸಿಗುತ್ತವೆ. ಈ ಯಶಸ್ಸಿಗೆ ಕಾರಣ, ಬಹುಶಃ, ಇಲ್ಲಿ ಅವರೂ ಜನಪದರಾಗಿಯೇ ಕಾಣಿಸಿಕೊಳ್ಳುವುದಾಗಿರಬಹುದು. ಜನಪದ ಸಾಹಿತ್ಯದಲ್ಲಿ ಗಂಗೆಗೌರಿಯ ಸಂಬಂಧದ ಬಗ್ಗೆ ಅನೇಕ ಪಾಠಾಂತರಗಳು ಸಿಕ್ಕುತ್ತವೆ. ಅವುಗಳಲ್ಲಿ ಮುಖ್ಯವಾದ ಪಾಠಾಂತರಗಳ ಆಧಾರದಮೇಲೆ ಆ ಇಬ್ಬರ ಕೆಲವು ಚಿತ್ರಗಳನ್ನು ಇಲ್ಲಿ ಕೊಡಲಾಗಿದೆ.
ನೀಲಮ್ಮ ಮೀಯುವಾಗ ನೀರಿನಲ್ಲಿ ಮಲ್ಲಯ್ಯನ ಕಳಸವನ್ನು ಕಾಣುತ್ತಾಳೆ. ಸ್ನಾನಮಾಡಿ ಮಲಗಿದಮೇಲೆ ಅವಳಿಗೆ ಒಂದು ಕನಸು ಬೀಳುತ್ತದೆ. ಮಲ್ಲಯ್ಯ ಕನಸಿನಲ್ಲಿ ಕಾಣಿಸಿಕೊಂಡು ಕನ್ನೆಯರು ಹುಟ್ಟಿದರೆ ತನಗೆ ಕೊಡುವಂತೆ ಕೇಳುತ್ತಾನೆ. ಕನಸೊಡೆದು ಎದ್ದ ಆಕೆ ಹೆಣ್ಣು ಹುಟ್ಟಿದರೆ ಲಿಂಗಕ್ಕೆ ಸಂತೋಷದಿಂದ ಧಾರೆ ಎರೆದೇನೆಂದು ಹಿಗ್ಗುತ್ತಾಳೆ. ಅದರಂತೆ ಅವಳಲ್ಲಿ ಗಿರಿಜೆ ಹುಟ್ಟುತ್ತಾಳೆ. ಅದನ್ನು ತಿಳಿದ ಗಿರಿಯ ಮಲ್ಲಯ್ಯ ಬೆಟ್ಟದಷ್ಟು ಹೊನ್ನನ್ನು ಹೊರಿಸಿಕೊಂಡು ಅವಳನ್ನು ಕೇಳಲು ಬರುತ್ತಾನೆ. ಮಲ್ಲಯ್ಯನ ಮುಂದೆ ಬಣ್ಣದ ಹಚ್ಚಡದ ಬಸವಯ್ಯ ಬಂದು ನಮ್ಮ ಮಠಕ್ಕೆ ಹೆಣ್ಣನ್ನು ಕೊಡಿ ಎಂದು ಕೇಳುತ್ತಾನೆ. ಮಲ್ಲಯ್ಯನ ಬೈರಾಗಿಬಾಳನ್ನು ಗಿರಿಜೆಯ ತಂದೆತಾಯಿಯರು ಜರಿಯುತ್ತಾರೆ. ಅದರಿಂದ ಗಿರಿಜೆಗೆ ದುಃಖವಾಗುತ್ತದೆ. ಮಲ್ಲಯ್ಯನ ಕಷ್ಟಕರ ಜೀವನವನ್ನು ತಾಯಿ ವಿವರಿಸುತ್ತಾಳೆ. ಗಿರಿಜೆ ಎಲ್ಲ ತ್ಯಾಗಕ್ಕೂ ಸಿದ್ಧಳಾಗುತ್ತಾಳೆ. ಕೋಪಗೊಂಡ ತಂದೆತಾಯಿಯರು ಅವಳನ್ನು ಹೊರಗೆ ತಳ್ಳಿಬಿಡುವುದಾಗಿ ಹೆದರಿಸುತ್ತಾರೆ. ಅತ್ತ ಮಲ್ಲಯ್ಯ ಗಿರಿಜೆಯ ಯೋಚನೆಯಲ್ಲಿಯೇ ಮಲಗಿದ್ದು ಅವಳನ್ನು ಗೆದ್ದು ತರಲು ಮತ್ತೆ ಹೊರಡುತ್ತಾನೆ. ಜಂಗಮನ ವೇಷದಲ್ಲಿ ಬಂದ ಅವನು ಕೆರೆಯಲ್ಲಿ ನೀರು ಮೊಗೆಯತ್ತಿದ್ದ ಗಿರಿಜೆಯನ್ನು ಕಾಣುತ್ತಾನೆ. ಅ ಚಲುವೆಯನ್ನು ಕಂಡು ತನ್ನ ಜಪವನ್ನೇ ಮರೆತು ಬಿಡುತ್ತಾನೆ. ಅವರಿಬ್ಬರಲ್ಲಿ. ಸರಸ ಸಂಭಾಷಣೆ ನಡೆದು ಪ್ರೇಮಾಂಕುರವಾಗುತ್ತದೆ. ಅವಳನ್ನು ಕೊಡಲು ತಂದೆತಾಯಿಯರೂ ಒಪ್ಪುತ್ತಾರೆ. ಮದುವೆ ವಿಜೃಂಭಣೆಯಿಂದ ನಡೆಯುತ್ತದೆ.
ಇನ್ನೊಂದು ಪಾಠಾಂತರ ಹೀಗಿದೆ : ಭೋಲೋಕದಲ್ಲಿ ಗೌರಿಯ ಅವತಾರವದ ಮೇಲೆ ಸುಂದರ ಯುವತಿಯಾಗಿ ಅವಳನ್ನು ಯಾರಿಗೆ ಕೊಡಬೇಕೆಂಬುದು ತಂದೆತಾಯಿಗಳಿಗೆ ದೊಡ್ಡ ಸಮಸ್ಯೆಯಾಗಿಹೊಯಿತು. ಯಾವ ವರನನ್ನೂ ಅವಳು ಒಪ್ಪದೆ ನಿರಾಶೆಯನ್ನುಂಟುಮಾಡಿದಳು. ಯಾರಿಗೆ ಕೊಡಲಿ ಎಂದು ತಂದೆ ಮಗಳನ್ನೇ ಕೇಳುತ್ತಾನೆ. ಬ್ರಾಹ್ಮಣನಿಗೆ ಕೊಡಲೆ ಎಂದರೆ ಅವರ ಕಟ್ಟುನಿಟ್ಟಾದ ಜೀವನ ತನಗೆ ಒಗ್ಗದೆಂದು ಹೇಳಿ ನಿರಾಕರಿಸುತ್ತಾಳೆ. ಹೀಗೆಯೇ ಶಿವಭಕ್ತರು, ಕೋಮಟಿಗರು, ಒಕ್ಕಲಿಗರು, ತುರುಕರು, ಕುಂಬಾರರು, ಕುರುಬರು, ನಾಯ್ಕರು, ಗೊಲ್ಲರು ಮುಂತಾದ ವಿವಿಧ ಜಾತಿಯ ವಿವಿಧ ಕಸಬಿನವರನ್ನು ಸೂಚಿಸಿದರೂ ಹಲವು ಕಾರಣಗಳನ್ನು ಹೇಳಿ ಬೇಡವೆನ್ನುತ್ತಾಳೆ. ಕೊನೆಗೆ ಶಿವಗಂಗೆಯ ಸಂನ್ಯಾಸಿ ಮಠದಲ್ಲಿರುವ ಜಂಗಮನಿಗೆ ಕೊಟ್ಟು ಲಗ್ನ ಮಾಡಬಹುದೆಂದು ಮಗಳು ತಿಳಿಸಲು ಅದನ್ನು ಕೇಳಿದ ತಂದೆತಾಯಿಯರು ವಿಸ್ಮಯಗೊಳ್ಳುತ್ತಾರೆ. ಜಂಗಮಜೀವನದ ಅಸಹ್ಯವಾದ ಸ್ಥಿತಿಯನ್ನು ವಿವರಿಸುತ್ತಾರೆ. ಆದರೂ ಅವಳು ಕೇಳುವುದಿಲ್ಲ. ಕೋಪಗೊಂಡ ಅವರು ಈಕೆ ನಮ್ಮ ಘನತೆಯನ್ನು ಹಾಳುಮಾಡುವ ಹೆಣ್ಣು ಎಂದುಕೊಂಡು ಕಣ್ಣು ಕಟ್ಟಿ ಕಾಡಿಗೆ ಬಿಡುತ್ತಾರೆ. ಅಲ್ಲಿ ಗೌರಮ್ಮ ಹನ್ನೆರಡು ಬೆಟ್ಟದ ನಡುವೆ ಕುಳಿತು ಶಿವನನ್ನು ಕುರಿತು ತಪಸ್ಸು ಮಾಡುತ್ತಾಳೆ. ಶಿವ ಮುದಿಜಂಗಮನ ವೇಷ ಧರಿಸಿ ಜೋಳಿಗೆ ಹಿಡಿದು ಭಿಕ್ಷೆಗೆ ಬರುತ್ತಾನೆ. ಕಾಡಿನಲ್ಲಿ ಅವಳೇನನ್ನು ಕೊಟ್ಟಾಳು ? ಕೊನೆಗೆ ಶಿವ ತನ್ನ ನಿಜರೂಪವನ್ನು ತೋರಿ ಅವಳನ್ನು ತನ್ನೊಂದಿಗೆ ಮಠಕ್ಕೆ ಕರೆದುಕೊಂಡು ಹೋಗಿ ಅವಳ ತಂದೆತಾಯಿಗಳನ್ನು ಕರೆಸಿ ವಿಜೃಂಭಣೆಯಿಂದ ಮದುವೆ ಮಾಡಿಕೊಳ್ಳುತ್ತಾನೆ. ಜನಪದ ಸಾಹಿತ್ಯದಲ್ಲಿ ಗಂಗೆ ಕಾಣಿಸಿಕೊಳ್ಳುವುದು ಹೀಗೆ:
ಉಂಡುಟ್ಟು ಮಂಚದ ಮೇಲೆ ಮಲಗಿದ ಗಿರಿಮಾಜೆಗೆ ಕನಸಿನಲ್ಲಿ ಶಿವ ಕಾಣಿಸಿ ಗರ್ಭಿಣಿಯಾದ ಅವಳೊಡಲಲ್ಲಿ ಹೆಣ್ಣುಮಕ್ಕಳು ಹುಟ್ಟಿದರೆ ತನಗೆ ಕೊಡುವಂತೆ ಕೇಳುತ್ತಾನೆ. ಗಿರಿಮಾಜೆಗೆ ನವಮಾಸಗಳು ತುಂಬಿ ದಿನ ಹತ್ತಿರವಾಗಲು ಪತಿ ಗಿರಿರಾಯ ಸೂಲಗಿತ್ತಿ ಸಂಗಮ್ಮನನ್ನು ಹುಡುಕಿ ಕರೆತರುತ್ತಾನೆ. ಎರಡು ಹೆಣ್ಣುಮಕ್ಕಳು ಜನಿಸುತ್ತವೆ. ಆದರೆ ಹಿರಿಯ ಹೆಣ್ಣು ಹುಟ್ಟಿದ ಗಳಿಗೆಯಲ್ಲಿ. ಶಕುನ ಸರಿತೋರದೆ ಹುಟ್ಟಿದ ಮನೆಗೆ ಅವಳು ಕಂಟಕಪ್ರಾಯಳಾಗುವಳೆಂದು ಸಂಗಮ್ಮನೂ ಪುರೋಹಿತರೂ ಹೇಳಿದ ಮೇಲೆ ತೊಟ್ಟಿಲ ಸಮೇತ ಹೊಳೆಗೆ ಬಿಟ್ಟು ಬರುತ್ತಾನೆ, ಗಿರಿರಾಯ. ಮೀನು ಹಿಡಿಯುವಾಗ ಅಂಬಿಗರ ಗಂಗನಿಗೆ ಆ ಮಗು ಸಿಕ್ಕುತ್ತದೆ. ಹೀಗೆ ಗಂಗೆ ಅಂಬಿಗರ ಮನೆಯಲ್ಲಿ ಬೆಳದು ದೊಡ್ಡವಳಾಗುತ್ತಾಳೆ.
ಜನಪದ ಸಾಹಿತ್ಯದಲ್ಲಿ ಗಂಗೆಗೌರಿಯರ ಜಗಳ ಒಂದು ಅತಿ ಮೋಜಿನ ಪ್ರಸಂಗವೆನಿಸಿದೆ. ಈ ಜಗಳದಲ್ಲಿ ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕಂಡುಬರುವ ಇಬ್ಬರು ಹೆಂಗಸರ ಜಗಳ, ಸವತಿಮಾತ್ಸರ್ಯಗಳು ಪ್ರತಿಬಿಂಬಿತವಾಗಿವೆ.
 ಗಂಗೆಯನ್ನು ತರುವ ಪೂರ್ವದಲ್ಲಿಯೇ ಗೌರಿಯ ಮುನಿಸು ಪ್ರಾರಂಭವಾಗುತ್ತದೆ. ತೊಳತೊಳತೊಳಗುತ್ತಿರುವ ಗಂಗೆಯನ್ನು ಸ್ವಪ್ನದಲ್ಲಿ ಕಂಡ ಶಿವ ಪಕ್ಕದಲ್ಲಿ ಮಲಗಿದ್ದ ಗೌರಿಗೆ ಹೇಳುತ್ತಾನೆ. ಅವನು ಯಾಕೆ ಹೇಳುತ್ತಿದ್ದಾನೆಂದು ಅವಳಿಗೆ ಅರ್ಥವಾಗುತ್ತದೆ. `ಮಕ್ಕಾಳಿರ್ಲೇಳಿ ಮನೆತುಂಬ ಎಂದು ವ್ಯಂಗ್ಯವಾಗಿ ನುಡಿದು ಮಗ್ಗುಲಾಗುತ್ತಾಳೆ. ಆದರೆ ಮರುದಿನ ಶಿವ ವೇಷಧರಿಸಿ ಹೊರಟೇಬಿಡುತ್ತಾನೆ. ಭೋಲೊಕಕ್ಕೆ ಬಂದ ಶಿವ ನೀರನ್ನು ಮೊಗೆಯುತ್ತಿರವ ಗಂಗೆಯನ್ನು ಕಂಡು ಜಪಮಾಡುತ್ತಿರುವಂತೆ ತಾನು ನಟಿಸುತ್ತಿದ್ದೇನೆಂಬುದನ್ನೂ ಮರೆಯುತ್ತಾನೆ. ಇವನ ಸ್ಥಿತಿಯನ್ನು ಕಂಡ ಗಂಗೆ 'ಜಪವ ಮರಿಸವ್ರ ಮಗಳಲ್ಲ ಎಂದು ಹಾಸ್ಯ ಮಾಡುತ್ತಾಳೆ. ಹಾಸ್ಯಕ್ಕಿಂತ ಹೆಚ್ಚಾಗಿ ಇಲ್ಲಿ ನಾನು ಬಡವರ ಮನೆಯ ಹುಡುಗಿ ಎಂಬ ದ್ಯೆನ್ಯದ ಭಾವ ಎದ್ದುಕಾಣುತ್ತದೆ. ಶಿವ ಗಂಗೆಯನ್ನು ತರುತ್ತಿರುವ ಸುದ್ದಿಯನ್ನು ಗಿಣಿರಾಮನಿಂದ ತಿಳಿದು ಗೌರಿ ಅಪ್ಪನ ಮನೆಗೆ ಹೊರಡುತ್ತಾಳೆ. ಅವರು ಬರುವ ಹೊತ್ತಿಗೆ ರಾಡ್ಮುಂಡ್ಗೆ (ಮಂಡಿಗದ್ದಗಳನ್ನು ಸೇರಿಸಿ ಮಲಗುವುದು) ಹಾಕಿ ಮಲಗು ಹೋಗು ಎಂದು ಅಪ್ಪ ಬುದ್ಧಿ ಹೇಳಿ ಕಳಿಸುತ್ತಾನೆ. ಕದ ತೆಗೆಯದೆ ಮಲಗಿದ್ದ ಗೌರಿಯನ್ನು ಹೆದರಿಸಿ ಕದ ತೆಗೆಸುತ್ತಾನೆ. ಶಿವ. ಗೌರಿ ಊಟಕ್ಕೆ ಎರಡು ಮಣೆಗಳನ್ನು ಹಾಕುತ್ತಾಳೆ. ಇಬ್ಬರುಂಟೇನೆ ಪುರಷ್ಯರು ?' ಎಂದು ಕೇಳಿದ ಶಿವನಿಗೆ 'ಸಿವ್ನ ಕೆಂಜಡೆಯ ಮುಡಿವಳಗೆ ಇರುವ ಸಿವ್ಗಂಗೇಗೆ ಒಂದು, ನಿಮಗೊಂದು ಎಂದು ಉತ್ತರಿಸುತ್ತಾಳೆ. ಶಿವ ಅಪ್ರತಿಭನಾಗುತ್ತಾನೆ. ಅನಂತರ ಗೌರಿ ಗಂಗೆಗೆ ಹರಸುತ್ತ 'ಅಂಬುಗನ ಮಗಳೆ ಸುಕುಬಾಳೊ ಎನ್ನುತ್ತಾಳೆ. ಅಂಬಿಗನ ಮಗಳು ಎಂದು ಕರೆದಳಲ್ಲ ಎಂದು ಗಂಗೆಗೆ ಚುರುಕಾಗುತ್ತದೆ. 'ಕೆಂಪೇರ ಜಗಳ ಶಂಖ ಬಾರಿಸಿದ್ಹಂಗ ಮೊದಲಾಗುತ್ತದೆ. ಜಗಳ. ಆಗಾಗ ಇಂಥ ಸಣ್ಣಪುಟ್ಟ ಜಗಳಗಳು ಇದ್ದೇ ಇರುತ್ತವೆ. ಹೀಗೇ ಇರುವಾಗ ಒಮ್ಮೆ ತಾನು ಮುಡಿದು ಮಿಕ್ಕಿದ ಹೊವನ್ನು ಗೌರಿ ಗಂಗೆಗೆ ಕಳಿಸುತ್ತಾಳೆ. ಒಳ್ಳೊಳ್ಳೆ ಹೂವನ್ನೆಲ್ಲ ತಾನು ಮುಡಿದು ಬಾಡಿಬತ್ತಿದ ಹೂವನ್ನು ಕಳಿಸಿದ್ದಾಳೆ ಎಂದುಕೊಂಡು ಗಂಗೆ ಅವನ್ನು ಬೀದಿಗೆ ಚೆಲ್ಲುತ್ತಾಳೆ, ಬೇಲಿಗೆ ಎಸೆಯುತ್ತಾಳೆ. ಇದನ್ನೆಲ್ಲ. ತಿಳಿದ ಗೌರಿ, ಗಂಗೆ ಬೆಸ್ತರ ಹುಡುಗಿಯೆಂದೂ ಅವಳ ತಂದೆ ಅಣ್ಣಂದಿರು ಮೀನು ಸೀಗಡಿ ಮಾರುವವರೆಂದೂ ಅವಳ ಬಂಧು ಬಳಗ ಸುಣ್ಣ ಸುಡುವವರೆಂದೂ ಜರೆಯುತ್ತಾಳೆ. ಸರಿ, ಪರಸ್ಪರ ಜಡೆ ಹಿಡಿದು ಜಗಳ ಪ್ರಾರಂಭಿಸುತ್ತಾರೆ. ಕುಸ್ತಿಯಲ್ಲಿ ಗಂಗೆ ಕೆಳಗೆ, ಗೌರಿ ಮೇಲೆ. ಜಗಳ ನಡೆಯುತ್ತಿದ್ದಾಗ ಗೌರಿ ಹೊರಗಾಗುತ್ತಾಳೆ. ಮಳೆದೇವರು ಗಾಳಿದೇವರುಗಳನ್ನು ಕರೆದು ಗಂಗೆ ಆಣೆ ಭಾಷೆ ತೆಗೆದುಕೊಳ್ಳುತ್ತಾಳೆ. ಭೂಮಿಯ ಮೇಲಿನ ನೀರನ್ನೆಲ್ಲ. ಮಾಯ ಮಾಡುತ್ತಾಳೆ. ಗೌರಿ ನೀರನ್ನು ತರಲು ಮಗನಾದ ಚೆನ್ನ ವೀರನನ್ನು ಕಳಿಸುತ್ತಾಳೆ. ಹುಡುಕಿ ಹುಡುಕಿ ಸಾಕಾದ ಅವನನ್ನು ಕಾಶಿಗೆ ಹೋಗು ಎನ್ನುತ್ತಾಳೆ, ಗೌರಿ. ಕಾಶಿಯಲ್ಲೂ ನೀರಿಲ್ಲ. ಅಲ್ಲಿಂದ ಬಳಲಿ ಬರುವಾಗ ಗಂಗೆ ನೋಡುತ್ತಾಳೆ. ಅಲ್ಲೊಂದು ಹಳ್ಳವನ್ನು ಸೃಷ್ಟಿಮಾಡುತ್ತಾಳೆ. ಆ ಹಳ್ಳದಲ್ಲಿ ಮನ ದಣಿಯ ನೀರು ಕುಡಿದು ಸ್ನಾನಮಾಡಿ ಬುತ್ತಿ ಬಿಚ್ಚುತ್ತಾನೆ ವೀರಣ್ಣ. ಎರಡು ಪಾಲುಮಾಡಿ ಚಿಕ್ಕವ್ವನಾದ ಗಂಗೆಗೆ ಒಂದು ಪಾಲನ್ನು ಬಿಟ್ಟು ಉಳಿದದ್ದನ್ನು ತಾನು ಉಣ್ಣುತ್ತಾನೆ. ಆಮೇಲೆ ಹನ್ನೆರಡು ಕಂಬ ಅಡ್ಡೆ ನೀರು ಮೊಗೆದು ಹೆಗಲಮೇಲೆ ಹೊತ್ತು ಮೂರು ಹೆಜ್ಜೆ ಹೋಗುವಷ್ಟರಲ್ಲಿ ಸವತಿ ಗೌರಿಗೆ ನೀರು ಹೋಗುತ್ತಿದೆ ಎಂದು ತಿಳಿದ ಗಂಗೆ ಹಳ್ಳದಲ್ಲಿದ್ದ ಮತ್ತು ಅಡ್ಡೆಯಲ್ಲಿದ್ದ ನೀರನ್ನೆಲ್ಲ ಮಾಯ ಮಾಡುತ್ತಾಳೆ. ಇದು ಗಂಗೆಯ ಮಾಯ ಎಂದು ಅವನಿಗೆ ತಿಳಿದುಹೋಗುತ್ತದೆ. ಮೂವತ್ತು ದಿನದಿಂದ ಊಟ ಇಲ್ಲದೆ ಗೌರಿ ಬಳಲುತ್ತಿದ್ದು ಕೈಲಾಸಗಿರಿಯಲ್ಲಿರುವ ಶಿವನ ಬಳಿಗೆ ಮಗನನ್ನು ಕಳಿಸುತ್ತಾಳೆ. ಶಿವನಿಗೆ ಜಗಳದ ವಿಷಯವನ್ನು ಹೇಳುತ್ತಾನೆ, ವೀರಣ್ಣ. ಶಿವ ಬರುತ್ತಾನೆ. ಗೌರಿ ಹೊರಗೆ ಕೂತಿದ್ದಾಳೆ. ಹಾಲುಮೊಸರು ತುಪ್ಪ ಜೇನುಗಳ ಅಡ್ಡೆಯನ್ನು ತರಲೇ ಎಂದು ಕೇಳುತ್ತಾನೆ ಯಾವುದರಿಂದಲೂ ತನ್ನ ಸೂತಕ ಕಳೆಯುವುದಿಲ್ಲ ಎನ್ನುತ್ತಾಳೆ. ಗಂಗೆಯ ಬಳಿಗೆ ಹೋಗು ಎನ್ನುತ್ತಾನೆ. ಸತ್ತರೂ ಆಕೆಯ ಬಳಿಗೆ ಹೋಗಲಾರೆ ಎನ್ನುತ್ತಾಳೆ. ವಿಧಿಯಿಲ್ಲದೆ ಮಗನನ್ನು ಕಳಿಸುತ್ತಾಳೆ. ನಿನಗೆ ಬೇಕಾದರೆ ಒಂದು ಚೆಂಬು ಕೊಡುತ್ತೇನೆ, ನಿನ್ನವ್ವನಿಗೆ ಇಲ್ಲ, ಎನ್ನುತ್ತಾಳೆ ಗಂಗೆ. ನಮ್ಮ ಬಾವಿಯಲ್ಲಿ ಕಪ್ಪೆ ಇರುತ್ತವೆ. ಅದು ಕಲಕುನೀರು, ಮೀನು ಇರುತ್ತವೆ. ಅದು ಹೊಲಸುನೀರು-ಎಂದು ಕಟಕಿಯಾಡಿದ ಮೇಲೆ ಬರಿಗೈಯಲ್ಲಿ ಹಿಂತಿರುಗುತ್ತಾನೆ, ವೀರಣ್ಣ. ಪೆಟ್ಟಿಗೆಯಲ್ಲಿದ್ದ ಪಟ್ಟೆಸೀರೆ ಉಟ್ಟುಕೊಂಡು ಆಭರಣಗಳನ್ನೆಲ್ಲ ಧರಿಸಿಕೊಂಡು ಐದು ಜನ ಮಕ್ಕಳನ್ನು ಕರೆದುಕೊಂಡು ಗೌರಿಯೇ ಹೊರಡುತ್ತಾಳೆ. ಎಷ್ಟು ಕೂಗಿದರೂ ಗಂಗೆ ಬಾಗಿಲು ತೆಗೆಯುವುದಿಲ್ಲ. ಉಟ್ಟಿದ್ದ ಪಟ್ಟೆಸೀರೆ ಆಭರಣಗಳು ಐದು ಜನ ಮಕ್ಕಳು-ಏನು ಬೇಕಾದರೂ ಕೊಡುವೆನೆಂದರೂ ಉತ್ತರ ಬರುವುದಿಲ್ಲ. ಕೊನೆಗೆ ನನ್ನ ಭಾಗದ ಗಂಡನನ್ನು ಕೊಡುತ್ತೇನೆ ಎಂದಾಗ, ಹಾಲು ಅನ್ನ ಮುಟ್ಟಿ ಭಾಷೆ ಮಾಡಿಸಿಕೊಂಡು, ಗಂಗಮ್ಮ ಬಾಗಿಲು ತೆಗೆಯುತ್ತಾಳೆ. ಮಳೆದೇವರು ಗಾಳಿ ದೇವರನ್ನು ಕರೆದು ಆಣೆ ಭಾಷೆ ಬಿಡಿಸುತ್ತಾಳೆ.ಗುಡುಗು ಮಿಂಚುಗಳು ಕಾಣಿಸಿ ಜಡಿಮಳೆ ಸುರಿಯುತ್ತದೆ. ಸೂತಕ ತೀರಿಸಿಕೊಂಡು, ಇಬ್ಬರೂ ಜೊತೆಯಲ್ಲಿ ಈಜಾಡಿ, ಜೊತೆಯಲ್ಲಿ ಹಾಲು ಅನ್ನ ಉಂಡು, ಆಮೇಲೆ ಇವತ್ತು ರಾತ್ರಿ ಶಿವನನ್ನು ಕಳುಹು ಎಂಬ ಗಂಗೆಯ ಮಾತನ್ನು ಕೇಳಿ 'ಎಲ್ಲಾದ್ರೂ ಉಂಟೇನೆ ಎಂದು ಹೇಳಿ ಮಾತಿಗೆ ತಪ್ಪುತ್ತಾಳೆ ಗೌರಿ ಕೇಶಾಕೇಶಿ ಮತ್ತೆ ಪ್ರಾರಂಭವಾಗುತ್ತದೆ. ಎರಡು ಮೂರು ಪೆಟ್ಟು ತಿಂದ ಗಂಗೆ ಕೈಬೀಸಿ ಮಳೆರಾಯನನ್ನು ಕರೆಯುತ್ತಾಳೆ. ಗಂಗೆ ಮೊಣಕಾಲುದ್ದ ನೀರಲ್ಲಿ ನಿಂತರೆ, ಗೌರಿ ಕೊಚ್ಚಿಹೋಗುತ್ತಾಳೆ. ಬೇಟೆಗೆ ಹೋಗಿದ್ದ ಶಿವ ಬರುತ್ತಾನೆ. ಗಂಗೆಯನ್ನು ಬೆಸ್ತರ ಮನೆಗೆ ಕಳಿಸುತ್ತ 'ವರ್ಷಕ್ಕೊಮ್ಮೆ ಮಾರಿ ಹಬ್ಬದಲ್ಲಿ ನೀನು ಬಾ, ನಡು ಊರಲ್ಲಿ ನಿನ್ನ ಪೂಜುತ್ತಾರೆ, ಕುರಿಕೋಳಿಗಳ ನಿನಗೆ ಕಡಿತಾರೆ ಎಂದು ಹೇಳುತ್ತಾನೆ. 'ಬ್ರಾಹ್ಮಣರ ಮನೆಯಲ್ಲಿ ಸೇರಿಕೋ, ವರ್ಷಕ್ಕೊಮ್ಮೆ ಗೌರಿಹಬ್ಬದಲ್ಲಿ ನೀನು ಬಾ, ಮಲ್ಲಿಗೆ ಹೂವಿನ ಪೂಜೆ ನಿನಗೆ ಮಾಡುತ್ತಾರೆ ಎಂದು ಗೌರಿಗೆ ಹೇಳಿಕಳಿಸುತ್ತಾನೆ. 'ನಿಮ್ಮಿಬ್ಬರ ಮಧ್ಯದಲ್ಲಿ ಶಿವರಾತ್ರಿ ಹಬ್ಬ, ಆ ಹಬ್ಬದಲ್ಲಿ ನಾ ಬರುತ್ತೀನಿ ಎಂದು ಶಿವ ಮೂವರಿಗೂ ಮೂರು ಹಬ್ಬ, ನಿಯಮಿಸುತ್ತಾನೆ.

Tuesday, 14 January 2020

ನಾನೀಗ ಬದಲಾಗಲೇಬೇಕು.


* ನನ್ನ ಬದುಕಿನಲ್ಲಿ ಬಂದ ಎಲ್ಲರನ್ನು ಪ್ರೀತಿಸಿದ ಅವಧಿ ಮುಗಿದಾಯ್ತು. ಈಗ ನನ್ನನ್ನು ಪ್ರೀತಿಸುವ ಸರತಿ ಬಂದಿದೆ.

* ಇಡೀ ಜಗತ್ತನ್ನು ನನ್ನ ಭುಜದ ಮೇಲೆ ಹೊರಲು ನಾನೇನು ಅಟ್ಲಾಸ್ ನಕ್ಷೆಯಲ್ಲ, ನನಗು ಮಿತಿಯಿದೆ.

* ಇತರರು ತಪ್ಪು ಮಾಡಬಹುದು. ಹಾಗೆಂದ್ ಮಾತ್ರಕ್ಕೆ ಅವರನ್ನು ತಿದ್ದುತ್ತಾ ಕೂರುವುದು ನನ್ನ ಕೆಲಸವಲ್ಲ ಎಂದು ಅರ್ಥವಾಗಿದೆ.

* ಎಲ್ಲರಲ್ಲೂ ಪರಿಪೂರ್ಣತೆ ಹುಡುಕುತ್ತಾ ಕುಳಿತುಕೊಳ್ಳುವ ಬದಲು ನೆಮ್ಮದಿಯತ್ತ ಮೊರೆ ಹೋಗುತ್ತೇನೆ. ನೆಮ್ಮದಿಯೆಂದರೆ ಪರಿಪೂರ್ಣತೆಗೆ ಮಿಗಿಲು.

* ಈಗ ಮೊದಲಿಗಿಂತ ಹೆಚ್ಚಾಗಿ ಒಳ್ಳೆಯದನ್ನು ಪ್ರಶಂಸಿಸಲು ಕಲಿತಿದ್ದೇನೆ. ಅದು ನನ್ನೆದುರಿನ ವ್ಯಕ್ತಿಯ ಚೈತನ್ಯವನ್ನು ಮಾತ್ರವಲ್ಲ, ನನ್ನ ಜೀವನೋತ್ಸಹವನ್ನು ಪುಷ್ಟಿಗೊಳಿಸುತ್ತಿದೆ.

* ನನ್ನ ಅಂಗಿ ಚೂರು ಹರಿದಿದ್ದರು ಅಥವಾ ಕಲೆಯಾಗಿದ್ದರು ಅದರ ಬಗ್ಗೆ ತಲೆ ಕೆಡಿಸಕೊಳುತ್ತಿಲ್ಲ ಅದೇನೇ ಆಗಲಿ ನನ್ನ ವ್ಯಕ್ತಿತ್ವ ಹೊರನೋಟಕ್ಕಿಂತ ಮಿಗಿಲು.


* ನನ್ನನ್ನು ಗೌರವಿಸದವರಿಂದ ಬಹುದೂರ ಉಳಿದು ಬಿಡುತ್ತೇನೆ. ನನಗೆ ನನ್ನ ಮೌಲ್ಯದ ಅರಿವುಳ್ಳಷ್ಟು ಅವರಿಗೆ ಎಲ್ಲಿ ಬರಬೇಕು ಅಲ್ಲವೇ?

* ನನ್ನನ್ನು ಹತ್ತಿಕ್ಕಲು ಬರುವವರ ಮುಂದೆ ಪ್ರಶಾಂತವಾಗಿ ವರ್ತಿಸುತ್ತೇನೆ. ಅವರೇ ಮುಂದೆ ಹೋಗಲಿ. ಅಷ್ಟಕ್ಕೂ ನಾನ್ಯಾವ ಓಟದ ಸ್ಪರ್ದಿಯಲ್ಲ.

* ನನ್ನದೇ ಭಾವನೆಗಳಿಂದ ನಾನು ಕಸಿವಿಸಿಗೊಳ್ಳುವುದನ್ನು ನಿಲ್ಲಿಸಿದ್ದೇನೆ. ಅಷ್ಟಕ್ಕೂ ಅವುಗಳಿಂದಲೇ ನಾನು ಮನುಷ್ಯವೆನ್ನಿಸಿಕೊಂಡಿರುವುದು.

* ಸಂಬಂಧಗಳೊಂದಿಗೆ ರಾಜಿಯಾಗುವುದನ್ನು ಕಲಿತಿದ್ದೇನೆ. ಅಷ್ಟಕ್ಕೂ ಸಂಬಂಧಗಳಿಗಿಂತ ನನ್ನ ಆಹಂಕಾರ ದೊಡ್ಡದೇನಲ್ಲ.

* ಈ ಕ್ಷಣದಲ್ಲಿ ಬದುಕುವುದನ್ನು ಕಲಿತಿದ್ದೇನೆ. ಯಾರಿಗೆ ಗೊತ್ತು? ಈ ಕ್ಷಣವೇ ನನ್ನ ಬದುಕಿನ ಅಂತಿಮ ಕ್ಷಣವಾಗಬಹುದು.

* ನನಗೆ ಸಂತೋಷ ಕೊಡುವುದನ್ನು ನಾನು ಮಾಡುತ್ತೇನೆ. ಇದು ನನ್ನ ಸಂತೋಷದ ಸರದಿ. ಅದಕ್ಕೆ ನ್ಯಾಯ ಒದಗಿಸುವುದು ನನ್ನ ಜವಾಬ್ದಾರಿ. ಸಂತೋಷಕ್ಕೆ ನ್ಯಾಯ ಒದಗಿಸುವುದೆಂದರೆ,  ನನಗೆ ನಾನು ನ್ಯಾಯ ಒದಗಿಸುವುದು ಅಂದರ್ಥ.

ಯಲ್ಲಪ್ಪ ನಂದಿ.