Thursday, 27 September 2018

ಭಗತ್ ಸಿಂಗ್ ರವರ ಬಗ್ಗೆ ಒಂದು ಪರಿಚಯ

 ಕ್ರಾಂತಿ ಎಂದರೆ ಅದರಲ್ಲಿ ರಕ್ತಮಯ ಕಲಹ ಇರಬೇಕು ಎಂದೇನೂ ಇಲ್ಲ. ಹಾಗೆಯೇ ವೈಯುಕ್ತಿಕ ದ್ವೇಷಕ್ಕೂ ಇದರಲ್ಲಿ ಅವಕಾಶ ಇಲ್ಲ. ಅದು ಬಾಂಬ್ ಮತ್ತು ಪಿಸ್ತೂಲುಗಳ ಸಂಸ್ಕೃತಿ ಅಲ್ಲ. ನಮ್ಮ ಪ್ರಕಾರ ಕ್ರಾಂತಿ ಎಂದರೆ ಎದ್ದು ಕಾಣುವ ಅನ್ಯಾಯದಿಂದ ಕೂಡಿದ ಈಗಿನ ವ್ಯವಸ್ಥೆ ಬದಲಾಗಬೇಕು
– ಭಗತ್ ಸಿಂಗ್ – 


ಸೆಪ್ಟಂಬರ್ 27, 1907ರಂದು ಈಗಿನ ಪಾಕಿಸ್ತಾನದ ಲಾಯಲ್ಪುರ್ ಜಿಲ್ಲೆಯ ಜರಾನ್ ವಾಲಾ ತಾಲ್ಲೂಕಿನಲ್ಲಿರುವ ಬಂಗಾ ಹಳ್ಳಿಯಲ್ಲಿ ಭಗತ್ ಸಿಂಗ್ ರವರ ಜನನವಾಯಿತು. ಸ್ವಾತಂತ್ರ್ಯ ಚಳುವಳಿಯನ್ನು ನಡೆಸಿ ಯುವ ಜನತೆಗೆ ಪ್ರೀತಿ ಪಾತ್ರರಾಗಿದ್ದ ಭಗತ್ ಸಿಂಗ್ ರವರು ತನ್ನ 23ನೇ ವಯಸ್ಸಿನಲ್ಲಿ 1931ರ ಮಾಚರ್್ 23ರಂದು ಸಂಜೆ 7 ಗಂಟೆ 33 ನಿಮಿಷಗಳ ಸಮಯದಲ್ಲಿ ತನ್ನ ಇಬ್ಬರು ಸಂಗಾತಿಗಳಾದ ರಾಜಗುರು ಮತ್ತು ಸುಖದೇವ್ ರವರ ಜೊತೆ ಬ್ರಿಟೀಷ್ರ ದುರಾಡಳಿತದ ಭಾಗವಾಗಿ ನೇಣಿಗೆ ಶರಣಾಗತಿಯಾದರು.

ವ್ಯಕ್ತಿಗಳನ್ನು ತುಳಿದು ಹಾಕುವುದರಿಂದ ಯಾರು ಅವರ ವಿಚಾರಗಳನ್ನು ಕೊಲ್ಲಲಾರರು.
1919ರ ಏಪ್ರಿಲ್ 13ರಂದು ಅಮೃತಸರದ ಜಲಿಯನ್ ವಾಲಾಬಾಗ್ ನಲ್ಲಿ ಬ್ರಿಟೀಷರ ಕ್ರೌರ್ಯದಿಂದ ಸುಮಾರು ಎರಡು ಸಾವಿರಕ್ಕೂ ಅಧಿಕ ಜನರನ್ನು ಹತ್ಯೆಗಯ್ಯಲಾಯಿತು. 1919ರ ಏಪ್ರಿಲ್ 20ರಂದು ಭಗತ್ ಸಿಂಗ್ ರು ಜಲಿಯನ್ ವಾಲಾಬಾಗ್ ಪ್ರದೇಶಕ್ಕೆ ಹೋಗಿ ಮೂಕ ಪ್ರೇಕ್ಷಕರಾಗಿ ಅತ್ತಿಂದಿತ್ತ ಓಡಾಡಿ ರಕ್ತಸಿಕ್ತವಾದ ಮಣ್ಣನ್ನು ತನ್ನ ಡಬ್ಬಿಯಲ್ಲಿ ಹಾಕಿಕೊಂಡರು. ಬ್ರಿಟೀಷರ ಗುಂಡುಗಳಿಗೆ ಆಹುತಿಯಾದ ಸುಮಾರು ಎರಡು ಸಾವಿರ ಮುಗ್ಧ ಹಿಂದೂ, ಸಿಖ್ ಮತ್ತು ಮುಸಲ್ಮಾನರ ಸಮ್ಮಿಳಿತ ರಕ್ತದಿಂದ ಈ ಪ್ರದೇಶ ಪಾವನವಾಗಿದೆ. ಎಂಬ ಭಾವನೆ ಭಗತ್ ಸಿಂಗ್ ರ ಮನಸ್ಸಿನಲ್ಲಿ ಅಂದುಕೊಂಡರು.

ಸ್ವಾತಂತ್ರ್ಯ ಹೋರಾಟವನ್ನು ಸಂಘಟಿತಗೊಳಿಸಲು 1926ರ ಮಾರ್ಚ್ ನಲ್ಲಿ ನೌಜವಾನ್ ಭಾರತ್ ಸಭಾ ಎಂಬ ಸಂಘಟನೆಯನ್ನು ಪ್ರಪ್ರಥಮವಾಗಿ ರಚಿಸಿದಾಗ ರಾಮಕಿಶನ್ ಅಧ್ಯಕ್ಷರಾಗಿಯೂ ಭಗತ್ ಸಿಂಗ್ ಕಾರ್ಯದರ್ಶಿಯಾಗಿಯೂ ನೇಮಕಗೊಂಡರು. ನಂತರ ದಿನಗಳಲ್ಲಿ ಸಂಘಟನೆಯ ಕಾರ್ಯ ಚಟುವಟಿಕೆಯನ್ನು ವಿಸ್ತರಿಸಲು, 1928ರ ಸೆಪ್ಟಂಬರ್ನಲ್ಲಿ ದೆಹಲಿಯ ಫಿರೋಜ್ಷಾ ಕೋಟ್ಲಾದಲ್ಲಿ ನಡೆದ ಸಭೆಯಲ್ಲಿ ಭಗತ್ ಸಿಂಗ್, ಸುಖದೇವ್, ಬಿಜೋಯ್ ಕುಮಾರ್ ಸಿನ್ಹ, ಬ್ರಹ್ಮದತ್, ಸುರೇಂದ್ರ ಪಾಂಡೆ, ಜತೀಂದ್ರನಾಥ್ ದಾಸ್, ಯಶ್ ಪಾಲ್, ಚಂದ್ರಶೇಖರ್ ಆಜಾದ್, ಮಹಾಬೀರ್ ಸಿಂಗ್, ಭಗವತಿ ಚರಣ್, ರಾಜಗುರು, ಸೋಹನ್ ಸಿಂಗ್ ಜೋಶ್ ಇತ್ಯಾದಿ ಪ್ರಮುಖರು ಅರವತ್ತು ಮಂದಿ ಭಾಗವಹಿಸಿದ್ದ ಈ ಸಭೆಯಲ್ಲಿ 5 ಮಂದಿ ಮಹಿಳೆಯರಿದ್ದರು. ಸಮಾವೇಶದ ಕಾರ್ಯದರ್ಶಿ ಭಗತ್ಸಿಂಗ್, ಅದಾಗಲೇ ಒಂದು ಸಾವಿರ ಸದಸ್ಯರು ಸಂಘಟನೆಯಲ್ಲಿದ್ದರು. ಹೋರಾಟದ ಮಾರ್ಗಸೂಚಿಯಾಗಿ ಸಂಘಟನೆಗೆ ಸಮಾಜವಾದಿ ತತ್ವದ ಆಧಾರವಿರಬೇಕೆಂಬ ಸಲಹೆಯನ್ನು ಭಗತ್ ಸಿಂಗ್ ಸಭೆಯ ಮುಂದಿಟ್ಟು ನಂತರ ಹಿಂದುಸ್ತಾನ್ ಸಮಾಜವಾದಿ ಗಣತಂತ್ರ ಎಂಬ ಹೆಸರನ್ನು ಪಡೆಯಿತು.

ಕಿವುಡರಿಗೆ ಕೇಳಿಸಬೇಕಾದರೆ ಸದ್ದು ಬಹಳ ಜೋರಾಗಿರಬೇಕು. ಬಾಂಬೆಸೆದಾಗ ಯಾರನ್ನಾದರೂ ಕೊಲ್ಲುವುದು ನಮ್ಮ ಆಶಯವಾಗಿರಲಿಲ್ಲ. ನಾವು ಬ್ರಿಟೀಷ್ ಸರಕಾರಕ್ಕೆ ಬಾಂಬ್ ಹಾಕಿದ್ದೆವು – ಭಗತ್ ಸಿಂಗ್
1929ರ ಏಪ್ರಿಲ್ 8 ಅಂದಿನ ಬ್ರಿಟೀಷ್ ಸರಕಾರದ ಅಧಿಕಾರಾವಧಿಯಲ್ಲಿ ಕಾರ್ಮಿಕ ವಿವಾದಗಳ ಕಾಯಿದೆಯನ್ನು ಶಾಸನಸಭೆಯಲ್ಲಿ ಮಂಡಿಸಲು ನಿಗದಿಯಾಗಿದ್ದ ದಿನ. ಆ ದಿನದ ಆಯ್ಕೆ ಕೇವಲ ಆಕಸ್ಮಿಕವಲ್ಲ, ಭಾರತದ ಕಾರ್ಮಿಕ ವರ್ಗಕ್ಕೆ ಬಿಡಿಸಲಾಗದ ಕೈಕೋಳವನ್ನು ತೊಡಿಸಲು ಬ್ರಿಟೀಷ್ ಸರಕಾರ ಆ ದಿನವನ್ನು ಮೀಸಲಾಗಿರಿಸಿತ್ತು ಮತ್ತು ಹಿಂದೂಸ್ತಾನ್ ಸಮಾಜವಾದಿ ಗಣತಂತ್ರ ಸಂಘಟನೆಯ ಯೋಜನೆಯ ಕಾರ್ಮಿಕ ವರ್ಗದ ಪರವಾರ ಪ್ರಬಲ ಕ್ರಮವಾಗಿತ್ತು. ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ತ್ ಇಬ್ಬರು ಅಂದು ಕಾಯಿದೆಯನ್ನು ವಿರೋಧಿಸಬೇಕು ಮತ್ತು ಕಾಯಿದೆಯಲ್ಲಿ ಅಡಕವಾಗಿರುವ ಕಾರ್ಮಿಕ ವಿರೋಧಿ ಅಂಶವನ್ನು ಜನತೆಗೆ ತಿಳಿಸಬೇಕೆಂಬ ಸಂಘಟನೆಯ ಸಭೆಯ ತೀರ್ಮಾನದಂತೆ ಅಂದಿನ ಅಸೆಂಬ್ಲಿ ಹಾಲ್ನಲ್ಲಿ ಬಾಂಬು ಎಸೆದು ಗದ್ದಲ ಎಬ್ಬಿಸಿ ಬಂಧಿತರಾದರು ಮತ್ತು ಇಂಕ್ವಿಲಾಬ್ ಜಿಂದಾಬಾದ್ ಬ್ರಿಟೀಷ್ ಸಾಮ್ರಾಜ್ಯಶಾಹಿಗೆ ಧಿಕ್ಕಾರ ಎಂಬ ಘೋಷಣೆಯನ್ನು ಕೂಗಿದರು. ಎರಡು ವರ್ಷಗಳ ಜೈಲುವಾಸ, ಜೈಲಿನಲ್ಲೂ ಮತ್ತು ಹೊರಗೂ ದೊಡ್ಡ ಮಟ್ಟದಲ್ಲಿ ಚಳುವಳಿಗಳು ನಡೆದವು ಜೈಲಿನಲ್ಲೂ ಭಗತ್ಸಿಂಗ್ ಮತ್ತು ಸಂಗಾತಿಗಳು ಉಪವಾಸ ಸಹ ನಡೆಸಿದರು. ಎರಡು ವರ್ಷಗಳ ನ್ಯಾಯಾಲಯದಲ್ಲಿ ವಿಚಾರಣೆಯ ನಂತರ 1930ರ ಅಕ್ಟೋಬರ್ 7ರಂದು ತೀರ್ಪನ್ನು ಪ್ರಕಟಿಸಿ 1931ರ ಮಾಚರ್್ 23ರಂದು ಭಗತ್ ಸಿಂಗ್, ರಾಜಗುರು, ಸುಖದೇವ್ ಮೂವರನ್ನು ಗಲ್ಲಿಗೇರಿಸಲಾಯಿತು.

Wednesday, 5 September 2018

ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಷಯಗಳು.

ಜೀವನದಲ್ಲಿ ಜ್ಞಾನದ ಬೆಳಕು ಚೆಲ್ಲಿದ ಗುರುವನ್ನು ನೆನೆಯುವ ದಿನ ಇಂದು ಶಿಕ್ಷಕರ ದಿನ.
ಅಜ್ಞಾನವೆಂಬ ಅಂಧಕಾರದಲ್ಲಿ ಮುಳುಗಿರುವವನ ಬಾಳಿನಲ್ಲಿ ಕತ್ತಲು ಹೊಡೆದೋಡಿಸಿವಿದ್ಯೆಯೆಂಬ ಸುಜ್ಞಾನದ ಬೆಳಕನ್ನು  ತರುವ ಶ್ರೇಷ್ಠ ವ್ಯಕ್ತಿಯೇ ಗುರು.

ಗುರುವಿನ ಸ್ಥಾನದಲ್ಲಿ ತಂದೆ-ತಾಯಿಗಳು, ಶಿಕ್ಷಕರು, ಹಿರಿಯರು, ಹಿತೈಷಿಗಳು, ಸ್ನೇಹಿತರು ಮುಂತಾದವರು ನಿಲ್ಲುತ್ತಾರೆ. ಹೆಚ್ಚಾಗಿ ಗುರು ಎಂದ ತಕ್ಷಣ ನಮ್ಮ ನೆನಪಿಗೆ ಬರುವುದು ವಿದ್ಯಾದಾನದ ಮೂಲಕ ನಮ್ಮನ್ನು ವಿದ್ಯಾವಂತರನ್ನಾಗಿ ಮಾಡಿ, ಸಮಾಜಕ್ಕೆ ಹಾಗೂ ನಾಡಿಗೆ ಉತ್ತಮ ಪ್ರಜೆಗಳನ್ನಾಗಿ ಕೊಡುಗೆ ನೀಡಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಂತಹ ಶಾಲಾ ಶಿಕ್ಷಕರು, ಕಾಲೇಜು ಉಪನ್ಯಾಸಕರು ಹಾಗೂ ಅಧ್ಯಾಪಕ ವರ್ಗದವರು. ಪ್ರತಿ ವರ್ಷ ಸೆಪ್ಟೆಂಬರ್ 5ರಂದು ಜಗತ್ತು ಕಂಡ ಸರ್ವಶ್ರೇಷ್ಠ ಶಿಕ್ಷಕ, ಶಿಕ್ಷಕ ವೃತ್ತಿಯನ್ನು ತನ್ನ ಜೀವನಾಡಿಯೆಂದು ಭಾವಿಸಿದ್ದಂತಹ ಮಹಾನ್ ಪುರುಷ, ಮಾಜಿ ರಾಷ್ಟ್ರಪತಿ, ಭಾರತರತ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್‍ರವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ರಾಷ್ಟ್ರದೆಲ್ಲೆಡೆ ಎಲ್ಲ ಶಾಲಾ-ಕಾಲೇಜುಗಳಲ್ಲಿ ಸಂಭ್ರಮದಿಂದ ಆಚರಿಸುತ್ತಾರೆ.
ಜ್ಞಾನಾರ್ಜನೆ ಮತ್ತು ಜ್ಞಾನಬೋಧನೆ ತನ್ನ ಎರಡು ಕಣ್ಣುಗಳಂತೆ ಎಂದು ತಿಳಿದು ಜೀವನವಿಡೀ ಬೋಧನೆಗೆ ಹಾಗೂ ಈ ಮೂಲಕ ಸಮಾಜದ ಬದಲಾವಣೆಗೆ ತನ್ನ ತನು-ಮನವನ್ನು ಮೀಸಲಾಗಿಟ್ಟಿದ್ದ ಸರ್ವಪಲ್ಲಿ ರಾಧಾಕೃಷ್ಣನ್‍ರವರು ಜನಿಸಿದ್ದು 1888 ಸೆಪ್ಟೆಂಬರ್ 5 ರಂದು ತಮಿಳುನಾಡಿನ ತಿರುತ್ತಣಿಯಲ್ಲಿ.  ಚಿಕ್ಕ ವಯಸ್ಸಿನಿಂದಲೂ ಪುಸ್ತಕಗಳನ್ನು ಓದುವ ಗೀಳು ಹೆಚ್ಚಾಗಿದ್ದ ಇವರಿಗೆ ತದನಂತರದ ದಿನಗಳಲ್ಲಿ ತತ್ವಶಾಸ್ತ್ರ ಅಚ್ಚುಮೆಚ್ಚಿನ ಹಾಗೂ ಆಸಕ್ತಿಯ ವಿಷಯವಾಗಿ ಹೊರಹೊಮ್ಮಿತು. ಅವರು ತತ್ವಶಾಸ್ತ್ರ ಬೋಧನೆ ಮಾಡುವ ಸಮಯದಲ್ಲಿ ಇಡೀ ತರಗತಿಯೇ ನಿಶ್ಶಬ್ಧತೆಯಿಂದ ಇರುತ್ತಿತ್ತು. ಅಷ್ಟರಮಟ್ಟಿಗೆ ವಿದ್ಯಾರ್ಥಿಗಳು ರಾಧಾಕೃಷ್ಣನ್ ಅವರ ಬೋಧನೆಯನ್ನು ಬಹಳ ಇಷ್ಟಪಟ್ಟು ಆಲಿಸುತ್ತಿದ್ದರು. ರಾಧಾಕೃಷ್ಣನ್‍ರವರು ಬೋಧಿಸುತ್ತಿದ್ದ ತರಗತಿಗಳಲ್ಲಿ ಬೇರೆ ತರಗತಿಗಳ ವಿದ್ಯಾರ್ಥಿಗಳೂ ಕೂಡ ಬಂದು ಕುಳಿತು ಬೋಧನೆಯನ್ನು ಕೇಳುತ್ತಿದ್ದರು.


ಬೋಧಿಸುವ ಸಮಯದಲ್ಲಿ ತತ್ವಶಾಸ್ತ್ರ ವಿಷಯಗಳನ್ನು ಅಚ್ಚುಕಟ್ಟಾಗಿ, ಸ್ವಾರಸ್ಯಕರವಾಗಿ ಮನಮುಟ್ಟುವಂತೆ ಹೇಳುತ್ತಿದ್ದರು. ರಾಧಾಕೃಷ್ಣನ್‍ರವರ ಬೋಧನಾ ಕೊಠಡಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತುಂಬಿ ತುಳುಕುತ್ತಿತ್ತು. ಅಷ್ಟರಮಟ್ಟಿಗೆ ತಮ್ಮ ಪಾಂಡಿತ್ಯ, ಹಾವ-ಭಾವದಿಂದ ವಿದ್ಯಾರ್ಥಿಗಳ ಪ್ರೀತಿಯ ಹಾಗೂ ನೆಚ್ಚಿನ ಶಿಕ್ಷಕರಾಗಿದ್ದರು. ಆದರ್ಶ ಹಾಗೂ ಅತ್ಯುತ್ತಮ ಶಿಕ್ಷಕನ ಹೆಗ್ಗುರುತು ಮತ್ತು ಮಾದರಿಯಾಗಿದ್ದವರು ರಾಧಾಕೃಷ್ಣನ್‍ರವರು. ಸಾಧನೆಗೆ ಅಸಾಧ್ಯವಾದುದು ಈ ಜಗತ್ತಿನಲ್ಲಿ ಯಾವುದೂ ಇಲ್ಲ ಎಂಬುದನ್ನು ಎಲ್ಲಾ ಸಾಧಕರು ಹಾಗೂ ಸಾಧನೆಯ ಹಾದಿಯಲ್ಲಿರುವವರು ಖಡಾಖಂಡಿತವಾಗಿ ಒಪ್ಪಿಕೊಳ್ಳುತ್ತಾರೆ.  ಆದರೆ, ಸಾಧನೆ ಮಾಡಲು ಉತ್ತಮ ಮಾರ್ಗದರ್ಶಕ ಹಾಗೂ ಸೂಕ್ತ ಮಾರ್ಗದರ್ಶನ ಬೇಕಲ್ಲವೆ..? ಅಂತಹ ಮಾರ್ಗದರ್ಶಕರ ಮುಂಚೂಣಿ ಸ್ಥಾನದಲ್ಲಿ ನೆಲೆಸಿರುವವರೇ ಗುರು.
ಅದಕ್ಕಾಗಿ ಅಲ್ಲವೆ ಸಾಧನೆ ಮಾಡಲು ನಿಶ್ಚಯಿಸಿರುವವನಿಗೆ ಹಿಂದೆ ಗುರು ಮುಂದೆ ಗುರಿ ಇರಬೇಕೆಂದು ತಿಳಿದವರು ನುಡಿದಿರುವುದು. ಗುರುವಿನ ಮಾರ್ಗದರ್ಶನವಿಲ್ಲದೆ ಏನನ್ನಾದರೂ ಸಾಧಿಸಲು ಹೊರಟವನ ಪ್ರಯತ್ನ ಬರೀ ವ್ಯರ್ಥ ಪ್ರಯತ್ನವೇ ಸರಿ. ಹಾಗಾಗಿಯೇ ಅಲ್ಲವೇ, ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ ಎಂದು ದಾಸರು ನುಡಿದಿರುವುದು.


ಶಿಕ್ಷಕ ಎಂಬ ಪವಾಡ ಪುರುಷನ ಹಾಗೂ ಅವನ ಮಹಿಮೆಯನ್ನು ಆದಿಗುರು ಶಂಕರಾಚಾರ್ಯರು ತಮ್ಮ ಸ್ತೋತ್ರದ ಮೂಲಕ ಹೀಗೆ ಬಣ್ಣಿಸುತ್ತಾರೆ.
ಗುರುಬ್ರಹ್ಮ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರ
ಗುರುಸ್ಸಾಕ್ಷಾತ್ ಪರಂಬ್ರಹ್ಮ ತಸ್ಮೈಶ್ರೀ ಗುರವೇ ನಮಃ ||
ಗುರುವನ್ನು ಕೇವಲ ಒಬ್ಬ ವ್ಯಕ್ತಿಯನ್ನಾಗಿ ನೋಡದೆ, ಶಕ್ತಿಯಾಗಿ ನೋಡಿದಲ್ಲಿ ಅವನ ನಿಜವಾದ ಅಂತಃಶಕ್ತಿ ಅನಾವರಣಗೊಳ್ಳುತ್ತದೆ. ಅವನಲ್ಲಿರುವ ವಾತ್ಸಲ್ಯ, ಪ್ರೀತಿ, ತ್ಯಾಗ, ಚೈತನ್ಯದಂತಹ ವ್ಯಕ್ತಿತ್ವಗಳಿಗೆ ಅವನಿಗವನೇ ಸಾಟಿ. ಹಾಗಾಗಿಯೇ ಉಪನಿಷತ್ತಿನಲ್ಲಿ ಗು ಎಂದರೆ ಕತ್ತಲು, ರು ಎಂದರೆ ಹೋಗಲಾಡಿಸುವವನು ಎಂದು ಅದ್ಭುತವಾಗಿ ವರ್ಣಿಸಲಾಗಿದೆ. ನನ್ನ ಪ್ರೀತಿಯ ಶಿಕ್ಷಕ ವೃಂದದವರಿಗೆಲ್ಲರಿಗೂ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಷಯಗಳು.